ಬೆಂಗಳೂರು:- ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ ಎಂದು ಸಚಿವ ಪ್ರಿಯಾಂಕಾ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ X ಮಾಡಿರುವ ಪ್ರಿಯಾಂಕ ಖರ್ಗೆ, ಧರ್ಮಸ್ಥಳ ಚಲೋ ಮಾಡಿದ್ದ ಬಿಜೆಪಿಯವರು ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಧರ್ಮಸ್ಥಳ ಪ್ರಕರಣದಲ್ಲಿ ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು ನಾಲ್ಕು ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತವೇ? ಸೌಜನ್ಯ ಸಂಬಂಧಿ ವಿಠಲ ಗೌಡರವರು ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ ಎಂಬ ಅಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆ ಸ್ಥಳವು ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತದೆ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ.
ಸೌಜನ್ಯಳ ಮನೆಗೆ ಭೇಟಿ ನೀಡಿದ್ದ ಬಿಜೆಪಿಯವರು ಆ ಕುಟುಂಬದವರ ಹೇಳಿಕೆಯ ಬಗ್ಗೆ ಏನು ಹೇಳುತ್ತಾರೆ? ವಿಠಲ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ? ಬಿಜೆಪಿ ನಾಯಕರು ತಾವು ಸೌಜನ್ಯ ಕುಟುಂಬದವರ ಪರವೋ ಅಥವಾ ಅವರು ಆರೋಪಿಸುತ್ತಿರುವವರ ಪರವೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.