ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಶಾಸಕರ ಮತದಾನದ ನಿಯಮಗಳಲ್ಲಿ ಕಂಡುಬರುವ ವ್ಯತ್ಯಾಸದ ಬಗ್ಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಅವರು, ಒಂದೇ ಮತದಾರರಾಗಿರುವ ಶಾಸಕರಿಗೆ ಎರಡು ವಿಭಿನ್ನ ಮತದಾನ ಪದ್ಧತಿಗಳನ್ನು ಅನ್ವಯಿಸುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವಂತೆ, ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಶಾಸಕರು ತಮ್ಮ ಮತಪತ್ರವನ್ನು ಕಡ್ಡಾಯವಾಗಿ ಪಕ್ಷದ ಅಧಿಕೃತ ಏಜೆಂಟರಿಗೆ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಆದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಅದೇ ಶಾಸಕರಿಗೆ ಸಂಪೂರ್ಣ ಗೌಪ್ಯ ಮತದಾನದ ಹಕ್ಕು ನೀಡಲಾಗಿದೆ.
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಎರಡೂ ಚುನಾವಣೆಗಳಲ್ಲಿ ವಿಧಾನಸಭಾ ಸದಸ್ಯರೇ ಮತದಾರರಾಗಿದ್ದರೂ, ಮತದಾನ ವಿಧಾನದಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ ಎಂಬ ಪ್ರಶ್ನೆಯನ್ನು ಸುರೇಶ್ ಕುಮಾರ್ ಮುಂದಿಟ್ಟಿದ್ದಾರೆ. ಒಂದು ವೇಳೆ ಎರಡೂ ಚುನಾವಣೆಗಳು ಒಂದೇ ದಿನ ನಡೆದರೆ, ಅದೇ ಶಾಸಕ ರಾಜ್ಯಸಭೆಗೆ ಮತ ಹಾಕುವಾಗ ಮತಪತ್ರ ತೋರಿಸಬೇಕಾಗುತ್ತದೆ, ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು. ಈ ದ್ವಂದ್ವ ನಿಯಮಕ್ಕೆ ಕಾನೂನು ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಏನು ಸಮರ್ಥನೆ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವುದರಿಂದ ಚುನಾವಣಾ ಆಯೋಗ ಶೀಘ್ರ ಸ್ಪಷ್ಟನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.



