ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವನ್ನಪ್ಪಿದ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗುವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ನಡೆದಿದೆ. ಅಶಾಬೀ (54) ಮೃತ ಮಹಿಳೆಎಂದು ಗುರುತಿಸಲಾಗಿದೆ. ತಮ್ಮ ಪತಿ ಮಾಬುಸಾಬ್ ಜೊತೆಗೆ ಮೀನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದರು.
ಹಗಲಿನಲ್ಲಿ ಕೆರೆಯಲ್ಲಿ ಬಲೆ ಹಾಕಿ ರಾತ್ರಿ ವೇಳೆ ಮೀನುಗಳನ್ನ ಹಿಡಿಯಲು ಹೋಗಿದ್ದರು. ತೆಪ್ಪದಲ್ಲಿ ಹೋಗಿದ್ದ ವೇಳೆ ಕೆರೆ ಒಳಗೆ ಇರುವ ವಿದ್ಯುತ್ ಕಂಬದ ತಂತಿ ತಗುಲಿ ದುರಂತ ನಡೆದಿದ್ದು, ವಿದ್ಯುತ್ ಶಾಕ್ ಹೊಡೆದು ಕೆರೆಯಲ್ಲಿ ಬಿದ್ದು ಆಶಾಬೀ ಮೃತಪಟ್ಟಿದ್ದಾರೆ.
ಕೆರೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ಕಂಬದಿಂದ ತಂತಿ ಕಟ್ ಆಗಿ ನೀರಿನಲ್ಲಿ ನೇತಾಡುತ್ತಿತ್ತು. ವಿದ್ಯುತ್ ತಂತಿ ಕಟ್ ಆಗಿ ಬಿದ್ದಿದ್ದರಿಂದಲೇ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಪತಿ ಮಾಬುಸಾಬ್ಗೂ ವಿದ್ಯುತ್ ಶಾಕ್ ಹೊಡೆದು ಗಾಯಗಳಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಮಹಿಳೆಯ ಶವ ಹೊರಕ್ಕೆ ತೆಗೆದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೀನಿನ ಬಲೆಯಿಂದಲೇ ಶವ ಹೊರಕ್ಕೆ ತೆಗೆದಿದ್ದಾರೆ. ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


