ವಿಜಯನಗರ:- ಖಾಸಗಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಮಹಿಳೆ ಮೇಲೆ ಕಂಡಕ್ಟರ್-ಚಾಲಕ ಸೇರಿ ಮೂವರು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಬಳಿಯ ಚನ್ನಾಪುರದಲ್ಲಿ ಜರುಗಿದೆ.
ಎರಡು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದ್ದು, ಮಹಿಳೆಯ ಚೀರಾಟ ಕೇಳಿ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಹಾಗೂ ಕಂಡಕ್ಟರ್ ಸೇರಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬನಶಂಕರಿ ಹೆಸರಿನ ಖಾಸಗಿ ಬಸ್ ನ ಚಾಲಕ ಪ್ರಕಾಶ ಮಡಿವಾಳರ, ಕಂಡಕ್ಟರ್ ರಾಜಶೇಖರ್ (40), ಬಸ್ ಎಜೆಂಟ್ ಸುರೇಶ್ (46) ಬಂಧಿತರು.
ಘಟನೆ ವಿವರ:
ಕಳೆದ ಎರಡು – ಮೂರು ದಿನದ ದಿಂದೆ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಬೆಳಗಾವಿಯಿಂದ ಉಚ್ಚಂಗಿದುರ್ಗದ ಉಚ್ಚಂಗೆಮ್ಮನ ಜಾತ್ರೆಗೆ ಬಂದಿದ್ದರು. ಉಚ್ಚಂಗೆಮ್ಮನ ಜಾತ್ರೆ ಮುಗಿಸಿ ವಾಪಸ್ ತೆರಳೋದು ತಡರಾತ್ರಿ ಆಗಿದೆ. ರಾತ್ರಿ ವೇಳೆಯೇ ಬಸ್ಸಿಗಾಗಿ ಮಹಿಳೆ ಕಾಯುತ್ತಿದ್ದಳು. ಈ ವೇಳೆ ಬನಶಂಕರಿ ಹೆಸರಿನ ಬಸ್ ಬಂದಿತ್ತು. ಮಹಿಳೆ ಬಸ್ ಹತ್ತಿದ ವೇಳೆ ಹತ್ತಾರು ಜನರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರೆಲ್ಲಾ ಮುಂದಿನ ಸ್ಟಾಪ್ ಗೆ ಇಳಿದರು. ಎರಡು ಸಣ್ಣ ಮಕ್ಕಳೊಂದಿಗೆ ಒಬ್ಬಂಟಿ ಮಹಿಳೆ ಇರುವುದನ್ನ ಗಮನಿಸಿದ ಮೂರು ಜನ ಆರೋಪಿಗಳು, ರೂಟ್ ಬದಲಿಸಿ, ಉಚ್ಚಂಗಿದುರ್ಗದಿಂದ ದಾವಣಗೆರೆ ಕಡೆಗೆ ಬರುವ ಬದಲು ಚನ್ನಾಪುರ ಕರೆದು ಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.