ವಿಜಯಸಾಕ್ಷಿ ಸುದ್ದಿ, ಗದಗ: ಸಿಬ್ಬಂದಿಗಳ ಸಹಕಾರ-ವಿಶ್ವಾಸದೊಂದಿಗೆ ಸಾರ್ವಜನಿಕರ ಕುಂದು-ಕೊರತೆಗಳನ್ನು ನಿಗದಿತ ಕಾಲದದೊಳಗೆ ಪರಿಹರಿಸುವುದಾಗಿ ನಗರಸಭೆ ನೂತನ ಆಯುಕ್ತ ರಾಜಾರಾಮ ಪವಾರ ಹೇಳಿದರು.
ಅವರು ಸಭಾಪತಿ ಬಸವರಾಜ ಹೊರಟ್ಟಿಯವರ ಹಿತೈಷಿ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಗರಸಭೆಗೆ ಸಾರ್ವಜನಿಕರು ಸಮಸ್ಯೆಯನ್ನು ಹೊತ್ತು ಬಂದಾಗ ತಕ್ಷಣ ಸ್ಪಂದಿಸುವ ವಾತಾವರಣವನ್ನು ನಿರ್ಮಿಸುವುದರ ಜೊತೆಗೆ ನಗರಸಭೆಯ ಬಗ್ಗೆ ಹಾಗೂ ನಮ್ಮ ಸಿಬ್ಬಂದಿಯವರ ಬಗ್ಗೆ ಹೆಚ್ಚು ವಿಶ್ವಾಸ ಮೂಡುವಂತೆ ಪ್ರಯತ್ನಿಸುವ ಭರವಸೆಯನ್ನು ಗದಗ ಜನತೆಗೆ ನೀಡುವೆ ಎಂದರು.
ದಾಂಡೇಲಿಯಲ್ಲಿ ಅವರು ಕೆಲಸ ಮಾಡುವಾಗ ಸಭಾಪತಿ ಬಸವರಾಜ ಹೊರಟ್ಟಿಯವರು ನೀಡಿದ ಸಹಕಾರ ಮಾರ್ಗದರ್ಶನವನ್ನು ನೆನೆಸಿಕೊಂಡರಲ್ಲದೆ, ಮುಂದೆಯೂ ಅವರ ಸಹಕಾರವನ್ನು ಬಯಸುತ್ತೇನೆ. ನಾನು ಇಲ್ಲಿಯೇ ಕೆಲಸ ಮಾಡಿ ಹೋಗಿರುವುದರಿಂದ ನನ್ನ ಎಲ್ಲ ಸಿಬ್ಬಂದಿ ಕಾರ್ಯಕ್ಷಮತೆಯ ಬಗ್ಗೆ ನನಗೆ ಗೊತ್ತಿದೆ. ಆ ಆತ್ಮವಿಶ್ವಾಸದೊಂದಿಗೆ ನಗರಸಭೆಗೆ ಕಳೆಗಟ್ಟುವ ಕೆಲಸವನ್ನು ಮಾಡುತ್ತೇನೆಂದು ಹೇಳಿದರು.
ಡಾ.ಬಸವರಾಜ ಧಾರವಾಡ ಆಯುಕ್ತರನ್ನು ಸನ್ಮಾನಿಸಿ ಮಾತನಾಡಿ, ಗದಗ-ಬೆಟಗೇರಿ ನಗರಸಭೆಗೆ ತನ್ನದೇ ಆದ ಇತಿಹಾಸವಿದೆ. ಜೊತೆಗೆ ಗದಗ ಜನತೆಯ ಆಶೋತ್ತರಗಳಿಗೆ ನಗರಸಭೆ ಸ್ಪಂದಿಸುವ ಮೂಲಕ ಸಾರ್ವಜನಿಕರನ್ನು ನಿತ್ಯ ಅಲೆದಾಡದಂತೆ ಮಾಡುವಲ್ಲಿ ನೂತನ ಆಯುಕ್ತರು ವಿಶೇಷ ಕಾಳಜಿ ವಹಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯ ಮುಳಗುಂದ, ಪರಿಸರ ಇಂಜಿನಿಯರ್ ಆನಂದ ಬದಿ, ನಗರಸಭೆ ವ್ಯವಸ್ಥಾಪಕರಾದ ಪರಶುರಾಮ ಶೇರಖಾನೆ, ಎಮ್.ಎ. ಮುಜಾವರ, ಸಿ.ಬಿ. ಆರಾಧ್ಯಮಠ, ಮಹೇಶ ನೀಲಗುಂದ, ತಿರುಪತಿ ದ್ಯಾವನೂರ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.