ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕೇಂದ್ರ ಕಛೇರಿಯು ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ ಹುಬ್ಬಳ್ಳಿ ಯೋಜನಾ ಅನುಷ್ಠಾನ ಘಟಕದಲ್ಲಿ ಸಾಮರ್ಥ್ಯ ಅಭಿವೃದ್ಧಿ ಭಾಗವಾಗಿ ಹಣಕಾಸು ಮತ್ತು ಲೆಕ್ಕಪತ್ರ, ಗುತ್ತಿಗೆ ಕರಾರು ಒಪ್ಪಂದ ನಿರ್ವಹಣೆ ಹಾಗೂ ಖರೀದಿ ಪ್ರಕ್ರಿಯೆ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಕೆಯುಐಡಿಎಫ್ಸಿ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಸ್ಸೆಂಪ್ 24/7 ನಿರಂತರ ನೀರು ಸರಬರಾಜು ಯೋಜನೆ, ಕ್ಯುಮಿಪ್, ಎನ್ಕೆಯುಎಸ್ಐಪಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಕ್ಕ-ಪತ್ರ ಶಾಖೆಯ ಲೆಕ್ಕಾಧೀಕ್ಷಕರಿಗೆ, ಲೆಕ್ಕ-ಸಹಾಯಕರಿಗೆ ಹಾಗೂ ಡಾಟಾ ಎಂಟ್ರೀ ಆಪರೇಟರ್ ಅವರಿಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರದ ಉದ್ಘಾಟನೆಯನ್ನು ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರ ತಿಮ್ಮಪ್ಪ ಇವರು ಮಾಡಿ ಮಾತನಾಡುತ್ತ, ಯಾವುದೇ ಯೋಜನೆಯ ಪ್ರಗತಿಗೆ ಹಾಗೂ ಅದರ ನಿರ್ವಹಣೆಗೆ ಲೆಕ್ಕ-ಶಾಖೆಯ ಅಧಿಕಾರಿಗಳ ಜವಾಬ್ದಾರಿ ಬಹಳ ಮಹತ್ವವಾದದ್ದು. ಕೆಯುಐಡಿಎಫ್ಸಿ ವತಿಯಿಂದ ಹಮ್ಮಿಕೊಂಡ ಸದರಿ ತರಬೇತಿಯು ಅತಿ ಮುಖ್ಯ ಹಾಗೂ ಅಗತ್ಯವಾಗಿದ್ದು, ಲೆಕ್ಕ-ಪತ್ರ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಅಧಿವೇಶನಗಳಿದ್ದು ತರಬೇತಿಯ ಪ್ರಯೋಜನವನ್ನು ಪಡೆಯಲು ಕರೆ ನೀಡಿದರು.
ಕೆಯುಐಡಿಎಫ್ಸಿ ಕೇಂದ್ರ ಕಛೇರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ಡಾ. ಪೂರ್ಣಿಮಾ ಎಂ.ಆರ್. ಕಾರ್ಯಾಗಾರವನ್ನು ಹಮ್ಮಿಕೊಂಡ ಉದ್ದೇಶ, ರೂಪುರೇಷೆಗಳು ಹಾಗೂ ಕಾರ್ಯಾಗಾರದಲ್ಲಿ ನಡೆಯುವ ವಿವಿಧ ಅಧಿವೇಶನಗಳ ಮಾಹಿತಿಯನ್ನು ನೀಡಿದರು.
ಕೆಯುಐಡಿಎಫ್ಸಿ ಕೇಂದ್ರ ಕಛೇರಿಯ ರಾಜೇಶ್ವರ್ ಎಚ್.ಎನ್., ಸಹ ಪ್ರಧಾನ ವ್ಯವಸ್ಥಾಪಕರು, ಹಾಗೂ ಸುನೀಲ ರೈ, ಸಹ ಪ್ರಬಂಧಕರು (ಏಡಿಬಿ) ಇವರು ಹಣಕಾಸು ಮತ್ತು ಲೆಕ್ಕಪತ್ರ, ಗುತ್ತಿಗೆ ಕರಾರು ಒಪ್ಪಂದ ನಿರ್ವಹಣೆ ಹಾಗೂ ಖರೀದಿ ಪ್ರಕ್ರಿಯೆಯ ಕುರಿತು ವಿವಿಧ ಅಧಿವೇಶನಗಳನ್ನು ನಡೆಸಿದರು.