ವಿಜಯಸಾಕ್ಷಿ ಸುದ್ದಿ, ಗದಗ : ಹಳ್ಳಿಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸು ನನಸಾಗಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶುಕ್ರವಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಯೋಜನೆಗಳ ತಯಾರಿಕೆ ಪ್ರಕ್ರಿಯೆಯನ್ನು ಬಲವರ್ಧನೆಗೊಳಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದು ಹೊಸ ಅನುಭವ, ಆಲೋಚನೆ ಮೂಡಿಸಲು ಏರ್ಪಡಿಸಿದ ಕಾರ್ಯಾಗಾರವಾಗಿದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ತಮ್ಮನ್ನು ಗ್ರಾಮದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡು ಪ್ರತಿಜ್ಞಾಬದ್ಧರಾಗಿ ಕಾನೂನಿನಲ್ಲಿ ಕಲ್ಪಿಸಿರುವ ಅಧಿಕಾರವನ್ನು ಬಳಸಿ ಒಳ್ಳೆಯ ಕೆಲಸದ ಮೂಲಕ ಜನ ಕಲ್ಯಾಣ ಕಾರ್ಯಮಾಡಬೇಕು ಎಂದರು.
ಸಾಮಾನ್ಯ ಜನರಿಗೆ ಗ್ರಾಮ ಪಂಚಾಯಿತಿ ಮೇಲೆ ವಿಶ್ವಾಸ ಬರುವ ಹಾಗೆ ಜನರ ಬೇಕು-ಬೇಡಗಳನ್ನು ಸಂಗ್ರಹಿಸಿ ಅದನ್ನು ಅನುಷ್ಠಾನಗೊಳಿಸುವ ಕೆಲಸವಾಗಬೇಕು. ಗ್ರಾ.ಪಂ ಚುನಾಯಿತ ಜನಪ್ರತಿನಿಧಿಗಳಿಗೆ ಕಾನೂನು ಸಾಕಷ್ಟು ಅಧಿಕಾರವನ್ನು ನೀಡಿದೆ. ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಜಾಗೃತಗೊಳಿಸುವ ವೇದಿಕೆ ಇದಾಗಬೇಕು ಎಂದು ಹೇಳಿದರು.
ಕೇರಳ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ಎಮ್. ವಿಜಯಾನಂದ ಮಾತನಾಡಿ, ಕರ್ನಾಟಕವು ಅತ್ಯಂತ ಗಟ್ಟಿಯಾದ ಪಂಚಾಯತ ವ್ಯವಸ್ಥೆಯನ್ನು ಹೊಂದಿದೆ. ಪಂಚಾಯಿತಿಯ ಪ್ರತಿಯೊಬ್ಬ ಜನಪ್ರತಿಯೂ ಸಂವಿಧಾನದ 73 ಮತ್ತು ಪಂಚಾಯಿತಿಗೆ ಸಂಬಂಧಿಸಿದ ಅರ್ಟಿಕಲ್ ಹಾಗೂ ಸಂವಿಧಾನ ಪೀಠಿಕೆಯನ್ನು ಓದಿ ಅರ್ಥೈಸಿಕೊಳ್ಳಬೇಕು. ತಮ್ಮ ಗ್ರಾಮದ ಸಂಪನ್ಮೂಲ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಬೇಕು. ರಾಜ್ಯ, ಕೇಂದ್ರ ಸರ್ಕಾರಗಳಿಂದ ಬರುವ ಅನುದಾನವನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ವಾಸ್ತವವಾಗಿ ಪ್ರತಿಯೊಂದು ಗ್ರಾಮದಲ್ಲಿ ತನ್ನದೇ ಆದ ನ್ಯೂನತೆಗಳಿವೆ. ಅದನ್ನು ಪರಿಹರಿಸಬೇಕಾದರೆ ಪ್ರತಿಯೊಬ್ಬರೂ ಸ್ವಯಂ ಸೇವೆಯಿಂದ ತಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡುವುದಾಗಿ ಪಣತೊಡಬೇಕು. ಅಂದಾಗ ಮಾತ್ರ ಇಂತಹ ಕಾರ್ಯಾಗಾರ ಸಾರ್ಥಕವಾಗುತ್ತದೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಗ್ರಾಮದಲ್ಲಿನ ಜನರ ಪಾಲ್ಗೊಳ್ಳುವಿಕೆಯಿಂದ ಅವರ ಆಲೋಚಗೆ ತಕ್ಕಂತೆ ಅವರ ಸಮಸ್ಯೆಗಳನ್ನು ಪರಿಹರಿಸುವ, ಕಾನೂನಿನ ಪ್ರಕಾರ ಜನರು ಅಪೇಕ್ಷಿಸುವ ಯೋಜನೆಗಳು ಒಮ್ಮತದಿಂದ ಅನುಷ್ಟಾನಕ್ಕೆ ಬರಬೇಕು ಎಂದರು.
ಜನಪ್ರತಿನಿಧಿಗಳು ಸರಿಯಾದ ಸಮಯಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಕಳಿಸಿದಾಗ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಸರ್ಕಾರದಿಂದ ಅನುದಾನ ಒದಗಿ ಬರುತ್ತದೆ. ಅದನ್ನು ಉಪಯೋಗಿಸಿಕೊಂಡು ಗಾಂಧೀಜಿ ಅವರ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ಸಾಬ್ ಬಬರ್ಚಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ. ಸಿಇಒ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ವಿವಿಧ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಪಿಡಿಓಗಳು ಹಾಜರಿದ್ದರು.
ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ ಸ್ವಾಗತಿಸಿದರು. ಜಿ.ಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ ವಂದಿಸಿದರು.
ಈ ಕಾರ್ಯಾಗಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮನುಷ್ಯನಿಗೆ ಬೇಕಾದ ಅತಿ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಹೊಂದಬೇಕು ಎನ್ನುವ ಉದ್ದೇಶವನ್ನು ಒಳಗೊಂಡಿದೆ. ಹಾಗಾಗಿ ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ನಮ್ಮ ಗ್ರಾಮ ಅಭಿವೃದ್ಧಿ ಹೊಂದಬೇಕು. ದ್ವೇಷ, ಅಸೂಯೆ ಎಲ್ಲವನ್ನು ಮರೆತು ರಾಜಕೀಯ ಮಾಡದೇ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ನುಡಿದರು.
ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳು ಬಡತನವನ್ನು ನಿರ್ಮೂಲನೆಗೊಳಿಸುವ ಕ್ರಾಂತಿಕಾರಿಕ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರ ಬಡಜನರ ಮನೆಗೂ ಮಾಸಿಕ 5 ಸಾವಿರ ರೂ ದೊರೆಯುತ್ತಿದೆ. ಈ ಮೂಲಕ ಬಡತನವನ್ನು ಬೇರು ಸಮೇತ ಕಿತ್ತೊಗೆಯುವ ಕಾರ್ಯ ಸರ್ಕಾರದಿಂದ ಯಶ್ವಸಿಯಾಗಿ ಸಾಗಿದೆ.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.