ವಿಜಯಸಾಕ್ಷಿ ಸುದ್ದಿ, ಗದಗ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಕಪ್ಪತ್ತಗಿರಿ ಕಪೋತ ಅಂದರೆ ಪಾರಿವಾಳಗಳ ಹಿಂಡುಗಳನ್ನು ಹೊಂದಿದ ಪ್ರದೇಶ. ಇದರಿಂದ ಕಪೋತ ಮತ್ತು ಗಿರಿ ಎರಡೂ ಸೇರಿ ಕಪ್ಪತ್ತಗುಡ್ಡವಾಗಿದೆ. ಇಲ್ಲಿ ಸುಮಾರು 2 ಸಾವಿರಕ್ಕಿಂತ ಹೆಚ್ಚು ಗಿಡಮೂಲಿಗಳನ್ನು ಕಾಣುತ್ತೇವೆ. ದೇವರು ಮನುಷ್ಯನನ್ನು ಸೃಷ್ಟಿಸಿದಂತೆ ಅವನಿಗೆ ಬರುವ ರೋಗಾದಿಗಳ ನಿವಾರಣೆಗೆ ಗಿಡಮೂಲಿಕೆಗಳ ಸಂಪತ್ತನ್ನು ನಿರ್ಮಿಸಿದ್ದಾನೆ ಎಂದು ಕವಿ ಮಂಜುನಾಥ ಡೋಣಿ ಅಭಿಪ್ರಾಯಪಟ್ಟರು.
ಶ್ರೀ ಶರಣಮ್ಮನವರ ಧ್ಯಾನ ಯೋಗಾಶ್ರಮ ಜಲ್ಲಿಗೇರಿ, ನವರಸ ಕಲಾ ಸಂಘ ಬೆಟಗೇರಿ, ನಿರ್ಮಲ ಸೇವಾ ಸಂಸ್ಥೆ ಹಾಗೂ ನಯನತಾರ ಕಲಾಸಂಘ ಇವುಗಳ ಸಹಯೋಗದಲ್ಲಿ ಜಲ್ಲಿಗೇರಿಯಲ್ಲಿ ಹಮ್ಮಿಕೊಂಡ ಕಪ್ಪತ್ತಗುಡ್ಡದ ಸಸ್ಯಸಿರಿ ಹಾಗೂ ವಿಶ್ವ ತಾಯಂದಿರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕಾಯಕ್ಕೆ ಮತ್ತು ಬುದ್ಧಿಗೆ ಶಕ್ತಿ ಬರಯುವವರೆಗೂ ಬೆಳೆಸಿದ ತಾಯಿಗೆ ನಾವು ಚಿರಋಣಿಯಾಗಿರಬೇಕು. ಆಧುನಿಕದ ಆಡಂಬರದಲ್ಲಿ ಹೆತ್ತವರನ್ನು ಕಡೆಗಣಿಸುವುದು ಮಹಾಪಾಪ. ಕಪ್ಪತ್ತಗುಡ್ಡ ಕಲ್ಪವೃಕ್ಷ, ಕಾಮಧೇನು. ನಮಗೆ ಬೇಕಾದ ವಸ್ತುಗಳೆಲ್ಲಾ ದೊರಕುತ್ತವೆ. ಆದ್ದರಿಂದ ಕಪ್ಪತ್ತಗಿರಿ ನಮ್ಮ ಕರುನಾಡಿನ ಸಸ್ಯಸಂಪತ್ತನ್ನು ಹೊಂದಿದ ಸುಂದರ ಗಿರಿಯಾಗಿದೆ ಎಂದರು.
ಡಾ. ರಾಜೇಂದ್ರ ಗಡಾದ ಮಾತನಾಡಿ, ಕಪ್ಪತ್ತಗಿರಿಯ ಸಸ್ಯಸಂಪತ್ತು ಬೆಂಕಿಗಾಹುತಿಯಾಗುತ್ತಿದೆ. ನಾವು ಮಾನವ ನಿರ್ಮಿತ ಔಷಧ ಪಡೆಯುವುದಕ್ಕೆ ಉತ್ಸುಕರಾಗಿದ್ದೇವೆ. ಅದನ್ನು ಬಿಟ್ಟು ದೇವರು ನಿರ್ಮಿಸಿದ ವನಸ್ಪತಿಯನ್ನು ಬಳಕೆ ಮಾಡಿದರೆ ಸಮೃದ್ಧ ಆರೊಗ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆಶ್ರಮದ ಪ್ರಧಾನ ಸಂಚಾಲಕರಾದ ಚನ್ನಬಸವ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲಾ ತರವಾಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳಕಪ್ಪ ಜಲ್ಲಿಗೇರಿ ಕಪ್ಪತ್ತಗುಡ್ಡದ ಸಸ್ಯಸಿರಿ ಕುರಿತು ಉಪನ್ಯಾಸ ನೀಡಿದರು.
ಮುರಳೀಧರ ಸ್ಯಾವಿ, ಬಸವರಾಜ ಗೂಳರೆಡ್ಡಿ, ಸುನಿತಾ ಕುಬೇರಸಿಂಗ ದೊಡ್ಡಮನಿ ಉಪಸ್ಥಿತರಿದ್ದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಗಣೇಶ ಕಬಾಡಿ, ಧರ್ಮೇಂದ್ರ ಇಟಗಿ, ದ್ಯಾಮಣ್ಣ ಉಗಲಾಟ, ಸುನಿತಾ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.