ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ ಎಂಬುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿರುವ ಖ್ಯಾತ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಬ್ರಾಹ್ಮಣ ಸಮುದಾಯ ಕೆಂಡಕಾರಿದೆ.
ಅಲ್ಲದೇ ಈ ಕಾಮೆಂಟ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅನುರಾಗ್ ಕಶ್ಯಪ್ ಅವರು ಕ್ಷಮೆ ಕೋರಿದ್ದಾರೆ. ಎಸ್, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇತ್ತೀಚೆಗಿನ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಸಿಬಿಎಫ್ಸಿ ಮತ್ತು ಬ್ರಾಹ್ಮಣ ಸಮುದಾಯದ ಮೇಲೆ ಕೆಂಡ ಕಾರಿದ್ದರು. ಜೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಜೀವನ ಆಧರಿಸಿದ ‘ಫುಲೆ’ ಸಿನಿಮಾಕ್ಕೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು, ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಇದೇ ಕಾರಣಕ್ಕೆ ಅನುರಾಗ್ ಕಶ್ಯಪ್ ಸಿಟ್ಟಾಗಿದ್ದು ಸಿಬಿಎಫ್ಸಿ ವಿರುದ್ಧ ಹರಿಹಾಯ್ದಿದ್ದರು.
ಪ್ರಧಾನಿ ಮೋದಿ ಅವರು ಹೇಳಿರುವಂತೆ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ, ಹಾಗಿದ್ದ ಮೇಲೆ ‘ಫುಲೆ’ ಸಿನಿಮಾ ಬಿಡುಗಡೆ ಮಾಡಲು ಸಮಸ್ಯೆ ಏನು? ಜಾತಿ ವ್ಯವಸ್ಥೆ ಇಲ್ಲ ಎಂದಾದಮೇಲೆ ನಿಮಗೇಕೆ ಉರಿಯುತ್ತಿದೆ ಎಂದು ‘ಫುಲೆ’ ಸಿನಿಮಾ ವಿರೋಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ಪ್ರಶ್ನೆ ಮಾಡಿದ್ದರು. ಅಲ್ಲದೆ ‘ಫುಲೆ’ ಸಿನಿಮಾ ಬಿಡುಗಡೆಗೆ ಮುಂಚೆಯೇ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದಾದ ಮೇಲೆ ಅವರು ಸಿನಿಮಾ ನೋಡಿದ್ದು ಹೇಗೆ? ಸಿಬಿಎಫ್ಸಿಯವರೇ ಸಿನಿಮಾ ಲೀಕ್ ಮಾಡಿದ್ದಾರಾ ಎಂದು ಸಹ ಪ್ರಶ್ನೆ ಮಾಡಿದ್ದರು. ಅಲ್ಲದೆ ಅವರ ಪೋಸ್ಟ್ಗೆ ಬಂದ ಕಮೆಂಟ್ ಒಂದಕ್ಕೆ ‘ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ’ ಎಂದು ಪ್ರತಿಕ್ರಿಯೆ ನೀಡಿದ್ದರು.
ಇದೀಗ ತಮ್ಮ ಪೋಸ್ಟ್ಗೆ ಕ್ಷಮೆ ಕೇಳಿರುವ ಅನುರಾಗ್ ಕಶ್ಯಪ್, ‘ಇದು ನನ್ನ ಕ್ಷಮಾಪಣೆ, ನಾನು ಹೇಳಿದ ಮಾತುಗಳಿಗೆ ಅಲ್ಲ ಬದಲಿಗೆ ನನ್ನ ಪೋಸ್ಟ್ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಪ್ರಸರಣಕ್ಕೆ ಬಳಸಿಕೊಳ್ಳುತ್ತಿರುವ ಕಾರಣಕ್ಕೆ. ಭಾರಿ ಸಂಸ್ಕಾರವಂತರು ಎನಿಸಿಕೊಂಡ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಯಾವ ಹೇಳಿಕೆಯೂ ಈ ರೀತಿಯ ಬೆದರಿಕೆಗಳಿಗೆ ಅರ್ಹವಲ್ಲ. ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ಅದನ್ನು ನಾನು ಪಡೆಯುವುದೂ ಇಲ್ಲ’ ಎಂದಿದ್ದಾರೆ.
ನಾನು ಹೇಳಿರುವ ಮಾತಿಗೆ ಬೇಕಾದರೆ ನನ್ನ ಬೈಯ್ಯಿರಿ ಆದರೆ ಕುಟುಂಬದವರನ್ನು ಏಕೆ ಎಳೆದು ತರುತ್ತೀರಿ. ಬ್ರಾಹ್ಮಣರೇ, ಪಾಪ ಮಹಿಳೆಯರನ್ನು ಬಿಟ್ಟುಬಿಡಿ, ಇಷ್ಟು ಸಂಸ್ಕಾರ ಶಾಸ್ತ್ರಗಳಲ್ಲಿಯೂ ಇದೆ. ಕೇವಲ ಮನುವಾದದಲ್ಲಿ ಇಲ್ಲ ಅಷ್ಟೆ. ನೀವು ಎಂಥಹಾ ಬ್ರಾಹ್ಮಣರು ನೀವೇ ನಿರ್ಧರಿಸಿಕೊಳ್ಳಿ. ಉಳಿದಂತೆ ನನ್ನ ಕಡೆಯಿಂದ ಕ್ಷಮೆ ಇರಲಿ’ ಎಂದು ಹೇಳಿದ್ದಾರೆ.