ಕನ್ನಡಿಗರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಕೊನೆಗೂ ತಮ್ಮ ಅಹಂ ಪಕ್ಕಕ್ಕಿಟ್ಟು ಕನ್ಮಡಿಗರಿಗೆ ಕ್ಷಮೆ ಕೋರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಗೀತೆ ಹಾಡುವಂತೆ ಒತ್ತಾಯಿಸಿದ್ದ ಅಭಿಮಾನಿಯೊಬ್ಬರನ್ನುದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೋರಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಅವರು, “ಕ್ಷಮೆ ಕೋರುತ್ತೇನೆ ಕರ್ನಾಟಕ. ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಗಿಂತ ದೊಡ್ಡದು. ನಿಮ್ಮನ್ನು ಸದಾ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.
ಏನಿದು ವಿವಾದ:-
ಕಳೆದ ವಾರ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಗೀತೆ ಹಾಡುವಂತೆ ಒತ್ತಾಯಿಸಿದ್ದ ಅಭಿಮಾನಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಸೋನು ನಿಗಮ್, “ನಿಮ್ಮಂಥವರಿಂದಲೇ ಪಹಲ್ಗಾಮ್ ನಂಥ ಭಯೋತ್ಪಾದಕ ದಾಳಿಯಾಗುತ್ತಿರುವುದು” ಎಂದು ಹೇಳಿದ್ದರು. ಸೋನು ನಿಗಮ್ ರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾಷಾ ಪ್ರೇಮವನ್ನು ಭಯೋತ್ಪಾದನೆಗೆ ಹೋಲಿಸಿದ್ದ ಸೋನು ನಿಗಮ್ ರನ್ನು ಕನ್ನಡ ಚಿತ್ರರಂಗ ಬಹಿಷ್ಕರಿಸಬೇಕು ಎಂಬ ಒತ್ತಾಯವು ಕೇಳಿ ಬಂದಿತ್ತು.