ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಕ್ಕಳಿಗೆ ಬೇಸಿಗೆ ರಜೆಗಳ ಸಮಯದಲ್ಲಿ ಶಿಬಿರಗಳು ಉಪಯುಕ್ತವಾಗಿವೆ. ಇವು ಮಕ್ಕಳ ಮನಸನ್ನು ಮುದಗೊಳಿಸಿ, ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಕ.ರಾ.ನೌ. ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸೊಲಗಿ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಆಲೂರು ವೆಂಕಟ್ರಾವ್ ಸಭಾಭವನದಲ್ಲಿ ಯುವ ಡಾನ್ಸ್ ಅಕಾಡೆಮಿ ಧಾರವಾಡ ಆಯೋಜಿಸಿದ್ದ ಯುವ ಉತ್ಸವ-2024 ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧನ ಸಂಗ್ರಹಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಬರೀ ಅಭ್ಯಾಸ, ಓದು, ಟ್ಯೂಷನ್ ಇದಲ್ಲದೆ ಇಂತಹ ಡಾನ್ಸ್ ಅಕಾಡೆಮಿಗಳಿಗೆ ಕಳುಹಿಸುವುದು ಉತ್ತಮ. ಇದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರಾಮವಾಗಿ ಇರುತ್ತಾರೆ. ಎಲ್ಲ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.
ಅಕಾಡೆಮಿ ಸಂಸ್ಥಾಪಕ ರಮೇಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯು ಬೇಸಿಗೆ ಶಿಬಿರ, ಫ್ಯಾಷನ್ ಶೋ, ನೃತ್ಯ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಹಾಗೂ ಪರಿಸರ ಕಾಳಜಿ, ಮಕ್ಕಳ ಅಭಿವೃದ್ಧಿ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿಜಾಗೃತಿ ಮೂಡಿಸಿ, ಪಾಲಕರು ಮತ್ತು ಮಕ್ಕಳು ಮೊಬೈಲ್, ಟಿವಿ ಇಂತಹ ವಸ್ತುಗಳಿಂದ ದೂರವಿರುವಂತೆ ಸೂಚಿಸಿದರು.
ಬೇಸಿಗೆ ಶಿಬಿರದ ಶಿಕ್ಷಕರಾದ ಅನ್ನಪೂರ್ಣ ಗೌಡರ, ಸೌಮ್ಯ ಪಾಟೀಲ್, ಹೀನಾ ನದಾಫ್ ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ವಿದ್ಯಾರ್ಥಿ ಪ್ರತೀಕ್ ದೇಶಮನಿಯನ್ನು ಸನ್ಮಾನಿಸಲಾಯಿತು. ಸಂಜಯ್ ಬಿರಾದಾರ ಮತ್ತು ರವಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾನಂದ್ ಶಿಂಧೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಮೇಶ್ ಪಾಟೀಲ್ ವಂದಿಸಿದರು.
ಪೂಜಾ, ವಿಜಯಲಕ್ಷ್ಮಿ, ಉಳವಪ್ಪ, ದಿವ್ಯ, ಹಾಗೂ ವಿದ್ಯಾರ್ಥಿಗಳು ಪಾಲಕ-ಪೋಷಕರು ಉಪಸ್ಥಿತರಿದ್ದರು.



