ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಕೊವಿಡ್-19ನಿಂದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಸರಕಾರ ಖರೀದಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉತ್ತೇಜಿಸುತ್ತಿರುವುದರಿಂದ ಸರಕಾರಕ್ಕೂ ಕೂಡಾ ಆದಾಯ ಸಹಜವಾಗಿಯೇ ಬರಲಿದೆ. ಆದರೆ ಇದಕ್ಕೆ ತದ್ವಿರುದ್ದವೆಂಬಂತೆ ಶಿರಹಟ್ಟಿ ತಾಲೂಕಿನಲ್ಲಿ ಮಾತ್ರ ಉಪನೊಂದಣಿ ಅಧಿಕಾರಿ ಕಚೇರಿಯಲ್ಲಿ ಖರೀದಿ ನೊಂದಣಿ ಮಾಡಬೇಕಿದ್ದರೆ ಬರೋಬ್ಬರಿ ಒಂದು ತಿಂಗಳು ಬೇಕಂತೆ… ಹೀಗೆ ಅರ್ಜಿದಾರರು ನೀಡಿದಂತಹ ಅರ್ಜಿಯಲ್ಲಿ ದಿನಾಂಕ ನಮೂದಿಸಿ ಕೊಡುತ್ತಿದ್ದಾರೆ.
ಪರದಾಡುತ್ತಿರುವ ಗ್ರಾಮೀಣ ಪ್ರದೇಶದ ಜನತೆ : ನೊಂದಣಿ ಪ್ರಕ್ರಿಯೆ ಒಂದು ತಿಂಗಳು ಗಟ್ಟಲೇ ವಿಳಂಬವಾಗುತ್ತಿರುವುದರಿಂದ ಸತತ ಬರಗಾಲ ಹಾಗೂ ಅತೀವೃಷ್ಟಿಯಿಂದ ಕಂಗೆಟ್ಟಿರುವಂತಹ ಬಡ ರೈತರು ಹಾಗೂ ಸಾರ್ವಜನಿಕರು ನಿತ್ಯವೂ ಕಚೇರಿಗೆ ಪರದಾಡುವುದು ತಪ್ಪುತ್ತಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುವುದರ ಜೊತೆಗೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವಂತಹ ಜನತೆಯು ಇಲ್ಲಿಯ ಆಡಳಿತ ವ್ಯವಸ್ಥೆಗೆ ನಿತ್ಯವೂ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ.
ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಒಳ್ಳೇಯ ಬೆಳವಣಿಗೆಯಲ್ಲ, ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡಬಾರದು. ನಿಯಮಾನುಸಾರ ಖರೀದಿ ನೊಂದಣಿಯಾಗಬೇಕು. ಇಲ್ಲದೇ ಹೋದಲ್ಲಿ ಇಲ್ಲಿಯ ಅವ್ಯವಸ್ಥೆಯ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
ತಿಪ್ಪಣ್ಣ ಕೊಂಚಿಗೇರಿ, ತಾಪಂ ಸದಸ್ಯ.
ಮಧ್ಯವರ್ತಿಗಳ ದಾರಿ ಸುಗಮ : ನೊಂದಣಿ ಕಚೇರಿಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದನ್ನು ಇದನ್ನು ಸರಿಪಡಿಸಿಕೊಳ್ಳಬೇಕೆಂದು ಇತ್ತೀಚೆಗೆ ತಾಲೂಕ ಪಂಚಾಯತನಲ್ಲಿ ಜರುಗಿದಂತಹ ಸಭೆಯಲ್ಲಿ ಸದಸ್ಯರು ಉಪನೊಂದಣಾಧಿಕಾರಿಗೆ ಸೂಚನೆ ನೀಡಿದ್ದರೂ ಸಹ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿರುವುದಿಲ್ಲ. ಹೀಗಾಗಿ ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಹಿಡಿದುಕೊಂಡು ಹೋಗಿ ಹಣ ನೀಡಿದರೆ ಖರೀದಿ ಸುಲಭವಾಗಿಯೇ ಆಗುತ್ತಿದೆ ಎನ್ನುವ ಆರೋಪಗಳು ಸಹ ಇಲ್ಲಿ ಕೇಳಿ ಬರುತ್ತಿವೆ.
ಆಸರೆ, ಮಾರ್ಟಗೇಜ್ ಜಾಸ್ತಿ ಇರುವುದರಿಂದ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಎಂ.ವಿ.ಪತ್ತಾರ, ಉಪನೊಂದಣಾಧಿಕಾರಿ.
ತಹಸೀಲ್ದಾರ/ತಾಪಂ ಇಓ ಗಮನ ಹರಿಸಿ :ಕಂದಾಯ ಇಲಾಖೆಯ ಕಚೇರಿಗಳ ಸಂಕೀರ್ಣದಲ್ಲಿಯೇ ಇರುವ ಉಪನೊಂದಣಾಧಿಕಾರಿ ಕಚೇರಿ ಪಕ್ಕದಲ್ಲಿಯೇ ಇದ್ದು ಮಧ್ಯವರ್ತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಹಸೀಲ್ದಾರ ಇತ್ತ ಕಡೆ ಗಮನ ಹರಿಸಿ ಇಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವ ಅವಶ್ಯವಿದೆ. ಇಲಾಖೆಗಳ ಪ್ರಗತಿಪರಿಶೀಲನೆ ನಡೆಸುವ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೇವಲ ಸಭೆಗಳಲ್ಲಿ ಮಾತ್ರ ನಿರ್ದೇಶನ ನೀಡದೇ ವಾಸ್ತವಾಂಶ ತಿಳಿಯಲು ಹಾಗೂ ಬಡ ಜನತೆಗೆ ಅನುಕೂಲ ಕಲ್ಪಿಸುವುದಕ್ಕಾಗಿ ಇಲ್ಲಿ ಭೇಟಿ ನೀಡಿ ಪರಿಶೀಲಿಸಿ ಯೋಗ್ಯ ಕ್ರಮ ವಹಿ ಅವಶ್ಯವಿದೆ.