ವಿಜಯಸಾಕ್ಷಿ ಸುದ್ದಿ, ವಿಜಯಪುರ:
ಕೆ ಎಸ್ ಆರ್ ಟಿಸಿ ಬಸ್ ಮತ್ತು ಫಾರ್ಚೂನರ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ವಿಜಯಪುರ ನಾಗಠಾಣ ಶಾಸಕರ ಅಳಿಯ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ತಾಲೂಕಿನ ಜುಮನಾಳ ಕ್ರಾಸ್ ಬಳಿ ನಡೆದಿದೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡದ ವಿಜಯಕುಮಾರ್ ಕಾಶೀನಾಥ್ ದೊಡ್ಡಮನಿ, ಚಿದಾನಂದ ನಾಗೇಶ್ ಸೂರ್ಯವಂಶಿ (45), ಸೋಲಾಪೂರ ರಾಜೂರಿನ ಸೋಮನಾಥ ಕಾಳೆ (43) ಬಸವನಗರದ ಸಂದೀಪ್ ಪವಾರ್ (40) ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಕೆಎಸ್ಆರ್ಟಿಸಿ ಬಸ್ ಗದಗ ಜಿಲ್ಲೆಯ ನರಗುಂದದಿಂದ ವಿಜಯಪುರಕ್ಕೆ ನಿಶ್ಚಿತಾರ್ಥ ಕಾರ್ಯಕ್ಕೆ ಹೋಗಿತ್ತು. ನಿಶ್ಚಿತಾರ್ಥ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಎಂಎಚ್ 13 ಸಿಎಸ್ 3330 ನಂಬರಿನ ಪಾರ್ಚ್ಯೂನರ್ ಕಾರ್ ಕೆಎ 22 ಎಫ್ 2198 ನಂಬರ್ ನ ಬಸ್ ಗೆ ಡಿಕ್ಕಿ ಹೊಡೆದಿದೆ.
ಪಾರ್ಚ್ಯೂನರ್ ಕಾರಿನ ಅತಿವೇಗ ಹಾಗೂ ಚಾಲಕನ ಆಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಬಸ್ ನನಲ್ಲಿರುವವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.