ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಗದಗ ಎಪಿಎಂಸಿ ವ್ಯಾಪಾರ ವಲಯದ ವತಿಯಿಂದ ಸೋಮವಾರ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರ ಉತ್ಪನ್ನಗಳು ಮಾರುಕಟ್ಟೆಗೆ ಆಗಮಿಸದ ಕಾರಣ ಗದಗ ಎಪಿಎಂಸಿಯ ವಹಿವಾಟು ಸೇರಿದಂತೆ ವ್ಯಾಪಾರ ಚಟುವಟಿಕೆಗಳ ಮೇಲೂ ಪರಿಣಾಮ ಬಿದ್ದಿದೆ. ಇದರ ಪರಿಣಾಮವಾಗಿ ದಲಾಲರು, ವ್ಯಾಪಾರಸ್ಥರು, ಕಾರಕೂನರು, ಚಕ್ಕಡಿಯವರು, ಹಮಾಲರು ಹಾಗೂ ಕೃಷಿ ಆಧಾರಿತ ಕಾರ್ಮಿಕ ವರ್ಗದ ಜೀವನೋಪಾಯಕ್ಕೂ ಸಂಕಷ್ಟ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಗದಗ ಎಪಿಎಂಸಿಯ ಬಸವಣ್ಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಬನ್ನಿಮಹಾಂಕಾಳಿ ದೇವಸ್ಥಾನ, ಮಾರುತಿ ದೇವಸ್ಥಾನ ಹಾಗೂ ಕಾಶೀ ವಿಶ್ವನಾಥ ನಗರದ ದುರ್ಗಾದೇವಿ-ಕಾಶೀ ವಿಶ್ವನಾಥ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ವರುಣ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಜೋಡೆತ್ತಿನ ಚಕ್ಕಡಿಯೊಂದಿಗೆ ಡೊಳ್ಳು-ಮೇಳದ ಭವ್ಯ ಮೆರವಣಿಗೆ ನಡೆಸಲಾಯಿತು. ಬಳಿಕ ದೇವಾಲಯಗಳಲ್ಲಿ ವಿಶೇಷ ಸಂಕಲ್ಪ ಮಾಡಿ, ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿ ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳ್ಳಲಿ ಎಂದು ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ದಲಾಲರು, ಖರೀದಾರರು, ವ್ಯಾಪಾರಸ್ಥರು, ಕಾರಕೂನರು, ಚಕ್ಕಡಿಯವರು, ಹಮಾಲರು, ತಳಗಾಳು ಸಂಘದ ಸದಸ್ಯರು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪೂಜೆಯ ಬಳಿಕ ಹಮಾಲರು ಹಾಗೂ ಚಕ್ಕಡಿಯವರ ಸಂಘದ ಕಾರ್ಯಾಲಯದ ಎದುರು ಭಕ್ತರಿಗೆ ಸಂಗಟಿ-ಸಾರು ದಾಸೋಹ ಏರ್ಪಡಿಸಲಾಗಿತ್ತು. ನೂರಾರು ಜನರು ದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಮಳೆಯ ಕೊರತೆಯಿಂದ ರೈತರು ಮಾತ್ರವಲ್ಲದೆ ಕೃಷಿ ಆಧಾರಿತ ಸಂಪೂರ್ಣ ಆರ್ಥಿಕ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕಿದ್ದು, ಉತ್ತಮ ಮಳೆಯಾದರೆ ಮಾತ್ರ ರೈತರಿಂದ ಹಿಡಿದು ಕಾರ್ಮಿಕರವರೆಗೆ ಎಲ್ಲ ವರ್ಗದ ಜನರ ಬದುಕಿನಲ್ಲಿ ನೆಮ್ಮದಿ ಮೂಡಲಿದೆ ಎಂಬ ಆಶಯ ಕಾರ್ಯಕ್ರಮದುದ್ದಕ್ಕೂ ವ್ಯಕ್ತವಾಯಿತು.
‘ರೈತನ ನಗು ಮರಳಲಿ’
ಮಳೆಗಾಗಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದವರು, ಉತ್ತಮ ಮಳೆಯಾಗಿ ಕೃಷಿ ಉತ್ಪಾದನೆ ಹೆಚ್ಚಳವಾಗಲಿ, ರೈತರ ಬದುಕು ಸಮೃದ್ಧಿಯಾಗಲಿ ಹಾಗೂ ಎಪಿಎಂಸಿ ಸೇರಿದಂತೆ ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳಲಿ ಎಂದು ವರುಣ ದೇವರಲ್ಲಿ ಪ್ರಾರ್ಥಿಸಲಾಯಿತು.



