ಬೆಂಗಳೂರು: ನಕಲಿ ಚಿನ್ನವನ್ನು ಅಡಮಾನ ಇಟ್ಟು ಬ್ಯಾಂಕ್ಗೆ ವಂಚನೆ ಎಸಗಿದ್ದ ಬ್ಯಾಂಕ್ ಅಪ್ರೈಸರ್, ಬಳಿಕ ಅದೇ ಪ್ರಕರಣದಿಂದ ಪಾರಾಗಲು ಉದ್ಯಮಿಯೊಬ್ಬರಿಗೆ ₹1.53 ಕೋಟಿ ವಂಚಿಸಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಂಧಿತನನ್ನು ಪೀಣ್ಯದ ಖಾಸಗಿ ಬ್ಯಾಂಕ್ ಶಾಖೆಯೊಂದರಲ್ಲಿ ಅಪ್ರೈಸರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಎಂದು ಗುರುತಿಸಲಾಗಿದೆ. ಆರೋಪಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಸುಮಾರು 15 ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡಮಾನ ಇಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಸಾಲ ಪಡೆದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ನಾಗೇಶ್ ತನ್ನ ಸ್ನೇಹಿತರ ಸಹಾಯದಿಂದ ನಕಲಿ ಚಿನ್ನಾಭರಣಗಳನ್ನು ಅಡಮಾನ ಇಡುತ್ತಿದ್ದ. ಚಿನ್ನದ ಸರಗಳ ಕೊಂಡಿ ಮಾತ್ರ ಅಸಲಿ ಚಿನ್ನದಿಂದ ಮಾಡಲಾಗಿದ್ದರೆ, ಉಳಿದ ಭಾಗ ನಕಲಿಯಾಗಿತ್ತು. ಬ್ಯಾಂಕ್ ಆಡಿಟ್ ವೇಳೆ ಈ ಅಕ್ರಮ ಬೆಳಕಿಗೆ ಬಂದಿದ್ದು, ಬ್ಯಾಂಕ್ ಅಧಿಕಾರಿಗಳು ಹಣ ಮರುಪಾವತಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಪ್ರಕರಣದಿಂದ ಪಾರಾಗಲು ಆರೋಪಿ ತನ್ನ ಸ್ನೇಹಿತರ ಮೂಲಕ ಉದ್ಯಮಿ ಜಗದೀಶ್ ಅವರನ್ನು ಪರಿಚಯಿಸಿಕೊಂಡಿದ್ದಾನೆ. ಬ್ಯಾಂಕ್ನಲ್ಲಿ ಕಡಿಮೆ ಬೆಲೆಗೆ ಹರಾಜಿಗೆ ಬಂದಿರುವ ಚಿನ್ನವನ್ನು ಖರೀದಿಸಿದರೆ ಸುಮಾರು ₹40 ಲಕ್ಷ ಲಾಭವಾಗುತ್ತದೆ ಹಾಗೂ ಹಿಂದಿನ ಸಾಲಗಾರರು ಚಿನ್ನವನ್ನು ಬಿಡಿಸಿಕೊಳ್ಳುವುದಿಲ್ಲ ಎಂದು ನಂಬಿಸಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾನೆ.
ಆರೋಪಿಯ ಮಾತನ್ನು ನಂಬಿದ ಉದ್ಯಮಿ ಜಗದೀಶ್, ₹1.53 ಕೋಟಿ ಹಣ ನೀಡಿದ್ದರು. ಉದ್ಯಮಿಯಿಂದ ಪಡೆದ ಹಣವನ್ನು ನಾಗೇಶ್ ಬ್ಯಾಂಕ್ಗೆ ಪಾವತಿಸಿ, ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ತಾನು ವಂಚನೆಗೆ ಒಳಗಾಗಿರುವುದು ತಿಳಿದ ಬಳಿಕ ಜಗದೀಶ್ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ನಾಗೇಶ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



