ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಸುವುದಲ್ಲ, ಸಂಸ್ಕಾರ ನೀಡಿ ಮನುಷ್ಯನನ್ನು ನಿರ್ಮಾಣ ಮಾಡುವುದಾಗಿದೆ. ಇಂತಹ ಸಾರ್ಥಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಿದವರು ಬಿ.ಜಿ. ಅಣ್ಣಿಗೇರಿ ಗುರುಗಳು ಎಂದು ಗದುಗಿನ ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬಣ್ಣಿಸಿದರು.
ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದ ಆವರಣದಲ್ಲಿ ಶನಿವಾರ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ (ರಿ.) ವತಿಯಿಂದ ಆಯೋಜಿಸಿದ್ದ 7ನೇ ಪುಣ್ಯಸ್ಮರಣೆ, ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಗುರುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಣ್ಣಿಗೇರಿ ಗುರುಗಳು ತಮ್ಮ ಇಡೀ ಬದುಕನ್ನು ಮಕ್ಕಳ ಭವಿಷ್ಯ ಹಾಗೂ ವ್ಯಕ್ತಿತ್ವ ರೂಪಣೆಗೆ ಮೀಸಲಿಟ್ಟಿದ್ದರು. ನಿವೃತ್ತಿಯ ನಂತರವೂ ಬಡಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಅವರ ಸೇವೆ ಅಪಾರ. ಯಾವುದೇ ಕ್ಷೇತ್ರದಲ್ಲಿದ್ದರೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದರೆ ಪುಣ್ಯಪುರುಷರಾಗಬಹುದು. ಶಿಕ್ಷಕರ ದಿನದಂದೇ ಲಿಂಗೈಕ್ಯರಾದ ಅಣ್ಣಿಗೇರಿ ಗುರುಗಳ ಪುಣ್ಯಸ್ಮರಣೆಯನ್ನು ಇದೇ ದಿನ ಆಚರಿಸುತ್ತಿರುವುದು ವಿಶೇಷ ಎಂದು ತೋಂಟದ ಶ್ರೀ ಹೇಳಿದರು.
ಅಣ್ಣಿಗೇರಿ ಗುರುಗಳ ಸೇವೆಯ ಸಾರ್ಥಕತೆಯನ್ನು ವಿವರಿಸಿದ ತೋಂಟದ ಶ್ರೀ, ಆಶ್ರಮದ ಮೂಲಕ ಇಂದಿಗೂ ಬಡಮಕ್ಕಳ ಶಿಕ್ಷಣಕ್ಕೆ ನೆರವು ಮುಂದುವರಿದಿರುವುದನ್ನು ಶ್ಲಾಘಿಸಿದರು. ವರ್ಷಕ್ಕೆ ಸುಮಾರು ₹3.40 ಲಕ್ಷ ವಿದ್ಯಾರ್ಥಿವೇತನವನ್ನು ಬಡಮಕ್ಕಳಿಗೆ ನೀಡಲಾಗುತ್ತಿದ್ದು, ಅನೇಕ ಮಕ್ಕಳು ಆಶ್ರಮದಲ್ಲಿ ಆಶ್ರಯ ಪಡೆದು ಪ್ರಸಾದ ಸ್ವೀಕರಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಣ್ಣಿಗೇರಿ ಗುರುಗಳ ಶಿಷ್ಯರು ಉಚಿತವಾಗಿ ಜ್ಞಾನಬೋಧೆ ಮಾಡುತ್ತಿರುವುದು ಅವರ ಸೇವಾ ಪರಂಪರೆ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದರು.
ಮರಣೋತ್ತರ ಗುರುಶ್ರೀ ಪ್ರಶಸ್ತಿ
ನಿವೃತ್ತ ಮುಖ್ಯೋಪಾಧ್ಯಾಯ ದಿ. ಶಂಕ್ರಪ್ಪ ಗುರಪ್ಪ ಅಣ್ಣಿಗೇರಿ ಅವರಿಗೆ ಮರಣೋತ್ತರವಾಗಿ ಗುರುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಧರ್ಮಪತ್ನಿ ಗೌರಮ್ಮ ಅವರಿಗೆ ಪ್ರಶಸ್ತಿ ಹಾಗೂ ₹25 ಸಾವಿರ ಮೊತ್ತದ ಚೆಕ್ನ್ನು ಹಸ್ತಾಂತರಿಸಲಾಯಿತು.
ರಾಜಸ್ಥಾನದ ಉದಯಪುರದ ಡಾ. ಅಶೋಕ ಭಜಂತ್ರಿ ಹಾಗೂ ತೋರಣಗಲ್ಲಿನ ಎಂ.ಎಚ್. ಪ್ರದೀಪಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಗುರುಗಳಾದ ಬಿ.ಜಿ. ಅಣ್ಣಿಗೇರಿ ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ವೇದಿಕೆಯಲ್ಲಿದ್ದರು. ಆಶ್ರಮದಲ್ಲಿ ವಿವಿಧ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಬಸಯ್ಯ ಬೆಳ್ಳೇರಿಮಠ ಸ್ವಾಗತಿಸಿ ಪರಿಚಯಿಸಿದರು. ಮಂಜುಳಾ ತುಂಬರಮಟ್ಟಿ ನಿರೂಪಿಸಿದರು. ಆಂಜನೇಯ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಶ್ಚಂದ್ರ ಬೆಟದೂರ ವರದಿ ವಾಚಿಸಿ ವಂದಿಸಿದರು. ವಿಜಯಲಕ್ಷ್ಮೀ ಅಂಗಡಿ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಗಣ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಶಸ್ತಿ ಮೊತ್ತವನ್ನೇ ಶಿಕ್ಷಣಕ್ಕೆ ಅರ್ಪಿಸಿದ ಗೌರಮ್ಮ
ಪತಿಯ ಹೆಸರಿನಲ್ಲಿ ದೊರೆತ ಗೌರವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದ ಗೌರಮ್ಮ ಅವರು ₹25 ಸಾವಿರದ ಪ್ರಶಸ್ತಿ ಮೊತ್ತವನ್ನು ತಾವೇ ಇಟ್ಟುಕೊಳ್ಳದೆ, ಬಡಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಪ್ರತಿಷ್ಠಾನಕ್ಕೆ ಮರಳಿಸಿದರು. ಅವರ ಈ ನಡೆ ಸಮಾರಂಭದ ಪ್ರಮುಖ ವಿಶೇಷತೆಯಾಗಿ ಗಮನ ಸೆಳೆಯಿತು.



