ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಪುಣ್ಯಕ್ಷೇತ್ರದ ಶ್ರೀ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವ ಸೆ. 7ರಿಂದ 11ರವರೆಗೆ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ಸಿ. ನರಗುಂದ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 7ರಂದು ಬೆಳಗ್ಗೆ ಧ್ವಜಾರೋಹಣ ಹಾಗೂ ಮಹಾಯಜ್ಞ, ಮಧ್ಯಾಹ್ನ 12.15ಕ್ಕೆ ಜಾತ್ರಾಮಹೋತ್ಸವ ಉದ್ಘಾಟನೆ, ಸಂಜೆ 5.15ಕ್ಕೆ ಮಹಾರಥೋತ್ಸವ ನಡೆಯಲಿದೆ. ಸೆ. 8ರಂದು ಕಡುಬಿನ ಕಾಳಗ, ಸೆ. 9ರಂದು ಸಾಮೂಹಿಕ ಉಪನಯನ, ಸೆ. 10ರಂದು ಪಾಲಕಿ ಅಲಾವಿ ಗುಡ್ಡಕ್ಕೆ ತೆರಳುವ ಕಾರ್ಯಕ್ರಮ ಹಾಗೂ ಸೆ. 11ರಂದು ಮಹಾಪ್ರಸಾದ, ಪ್ರವಚನ, ಸಮಾರೋಪ, ದಾನಿಗಳಿಗೆ ಸನ್ಮಾನ ಮತ್ತು ಪೂಜಾಫಲ ಲಿಲಾವು ನಡೆಯಲಿದೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಸೆ. 7ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಮೋಹನ ಸಿ. ನರಗುಂದ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕರಾದ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರ ಕೆ. ರಾಘವೇಂದ್ರರಾವ್, ಡಿಎಸ್ಪಿ ಮರ್ತುಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ಈರಪ್ಪ ರಿತ್ತಿ ಸೇರಿದಂತೆ ಗಣ್ಯರು ಭಾಗವಹಿಸುವರು.
ಜಾತ್ರಾಮಹೋತ್ಸವದ ಮಹತ್ವ ಕುರಿತು ಮಾತನಾಡಿದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ, ಮೌನೇಶ್ವರರು ಧರ್ಮ ಜಾಗೃತಿ ಹಾಗೂ ಭಾವೈಕ್ಯತೆಯ ಸಂದೇಶ ಸಾರಿದ ಮಹಾತ್ಮರಾಗಿದ್ದು, ವರವಿ ಅವರ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಜಾತ್ರೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸೆ. 11ರ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು. ಡಾ. ಎಚ್.ಕೆ. ಪಾಟೀಲ ಘನ ಉಪಸ್ಥಿತರಿರುವರು. ಸಚಿವ ಬಸವರಾಜ ರಾಯರಡ್ಡಿ ಉದ್ಘಾಟಿಸುವರು. ಸಚಿವ ಕೆ.ಎಸ್. ಬಸವಂತಪ್ಪ ಗೌರವ ಉಪಸ್ಥಿತರಿರುವರು ಎಂದು ಟ್ರಸ್ಟ್ನ ಕೋಶಾಧ್ಯಕ್ಷ ಚಂದ್ರಕಾಂತ ಸೋನಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ಕೊಣ್ಣೂರ, ಮೌನೇಶ ಸಿ. ಬಡಿಗೇರ, ಉಮೇಶ ಅಕ್ಕಸಾಲಿ, ವೀರಣ್ಣ ಹಲವಾಗಲಿ, ನಾಗರಾಜ ಕಮ್ಮಾರ, ಶಂಕರಾಚಾರ್ಯರ ಪತ್ತಾರ ಹಾಗೂ ಈರಣ್ಣ ಪತ್ತಾರ ಉಪಸ್ಥಿತರಿದ್ದರು.



