ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ವರುಣ ದೇವನ ಕೃಪೆಗಾಗಿ ಇಲ್ಲಿಯ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಕಳೆದ ಒಂದು ತಿಂಗಳಿಂದ ಮಳೆಯಿಲ್ಲದೇ ಮುಂಗಾರು ಬಿತ್ತನೆಯ ಬೆಳೆಗಳು ಒಣಗುತ್ತಿದ್ದು, ರೈತರು ಮಳೆ ದೇವನ ಕೃಪೆಗಾಗಿ ದಂಡಿನ ದುರ್ಗಾದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು. ಮುತ್ತೈದೆಯರು ಗ್ರಾಮದ ವಿವಿಧ ದೇವಿ ದೇವಸ್ಥಾನಗಳಿಗೆ ತೆರಳಿ ಉಡಿ ತುಂಬುವ ಕಾರ್ಯವನ್ನು ನೆರವೇರಿಸಿದರು. ದುರ್ಗಾದೇವಿ ಕೆರೆಯಲ್ಲಿ ಈಶ್ವರ ಮತ್ತು ಬಸವಣ್ಣನ ಮೂರ್ತಿಯನ್ನು ತಯಾರಿಸಿ ವಿಧಿ-ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ಷಡಕ್ಷರಯ್ಯ ಬದ್ನಿಮಠ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರೈತರು ವರುಣ ದೇವ ಕೃಪೆ ತೋರಲೆಂದು ಸಂಕಲ್ಪ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.



