ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಜೈ ಹನುಮಾನ್ ಪ್ರೊಡಕ್ಷನ್ನ ‘ಮುತ್ತುರತ್ನ’ ಕನ್ನಡ ಚಲನಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಚಿತ್ರ ಸೆನ್ಸಾರ್ಗೆ ತೆರಳಿದೆ.
‘ಒಂದು ಪ್ರೇಮ ಗ್ರಂಥ’ ಎಂಬ ಉಪಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಚಿತ್ರದುರ್ಗ ಹಾಗೂ ಹಿರಿಯೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಅಶ್ವ ನಾಯಕನಾಗಿ ಹಾಗೂ ಸಹನಾ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ತಿಪ್ಪೇಶ್ ಮುದ್ದಾಪುರ, ದೇವು, ಮಲ್ಲಿಕಾ, ರಕ್ಷಿತಾ, ಗೋವಿಂದೇಗೌಡ, ಸಂಜು ಬಸಯ್ಯ, ಗಿರೀಶ್, ಅಪೂರ್ವ ಪವನ್ (ಮಜಾ ಟಾಕೀಸ್), ಹುಲುಗಪ್ಪ ಟಿ., ಕೇಶವಮೂರ್ತಿ ಜಿಎಚ್ ಬಿಜಿಕೆರೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಗೋಪಿನಾಥ ಎಂ., ಸಂಕಲನವನ್ನು ಶಿವರಾಜ್ ಮೇಹು, ಸಾಹಸವನ್ನು ಚಂದ್ರು ಬಂಡೆ ಹಾಗೂ ನೃತ್ಯ ನಿರ್ದೇಶನವನ್ನು ಬಾಲು ರೆಕ್ಸ್ ರಾಜು ನಿರ್ವಹಿಸಿದ್ದಾರೆ. ಎಸ್.ವಿ. ಶಿವಕುಮಾರ್, ಡಿವಿಜಿ ಹಾಗೂ ತಿಪ್ಪೇಶ್ ಹಾಲುವರ್ತಿ ಸಾಹಿತ್ಯ ರಚಿಸಿದ್ದಾರೆ.
ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜಿಸಿದ್ದು, ಬಾಳು ಬೆಳಗುಂದಿ, ಐಶ್ವರ್ಯ ರಂಗರಾಜನ್, ಅನಿರುದ್ಧ ಶಾಸ್ತ್ರಿ, ಲಹರಿ ಮಹೇಶ್, ರವೀಂದ್ರ ಸೊರವಾವಿ, ಅನುರಾಮ್ ಹಾಗೂ ಪ್ರಸನ್ನ ಭೋಜಶೆಟ್ಟರ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಉತ್ತರ ಕರ್ನಾಟಕದ ‘ನಾ ಡ್ರೈವರ್ ಪೂಜಾ’ ಖ್ಯಾತಿಯ ಪೂಜಾ ಡಿಕೆಡಿ ಚಿತ್ರದಲ್ಲಿನ ಒಂದು ಹಾಡಿಗೆ ನೃತ್ಯ ಮಾಡಿದ್ದು, ಈ ಹಾಡು ಉತ್ತರ ಕರ್ನಾಟಕದ ಪ್ರೇಕ್ಷಕರಿಗೆ ವಿಶೇಷ ಕಿಕ್ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಸಾಧನ ವಿಭಾಗವನ್ನು ಚಂದ್ರು ತಿರುಪತಿ ಹಾಗೂ ಎಂ.ಜಿ. ಕಲ್ಲೇಶ್ ನಿರ್ವಹಿಸಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಹೇಶ್ ಜಗತಾಪ್ ಹಾಗೂ ಸತೀಶ್ ಚೆಕ್ಕಂದವಾಡಿ ಸಹ ನಿರ್ದೇಶಕರಾಗಿದ್ದಾರೆ. ರಂಜಿತ್, ಕುಶಾಲ್ ಹಾಗೂ ಅನೂಪ್ ನಿರ್ದೇಶನ ತಂಡದಲ್ಲಿದ್ದಾರೆ. ಸ್ಟಿಲ್ ಛಾಯಾಗ್ರಹಣವನ್ನು ರಘು ನಿರ್ವಹಿಸಿದ್ದಾರೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ನಿರ್ದೇಶನದ ಹೊಣೆಯನ್ನು ತಿಪ್ಪೇಶ್ ಹಾಲುವರ್ತಿ ವಹಿಸಿಕೊಂಡಿದ್ದಾರೆ. ಹುಲುಗಪ್ಪ ಟಿ. ಹಾಗೂ ರುದ್ರಪ್ಪ ಪಿಎಚ್. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕೇಶವಮೂರ್ತಿ ಜಿಎಚ್ ಬಿಜಿಕೆರೆ ಹಾಗೂ ಯಶೋದ ಬಾಯಿ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.



