HomeKarnataka Newsಅಧಿಕಾರಿಗಳೇ ತಮಗೆ ತೋಚಿದಂತೆ ಸೂಕ್ಷ್ಮ ವಲಯ ನಿರ್ಧರಿಸುವಂತಿಲ್ಲ; ನಿರ್ದಿಷ್ಟ ಪ್ರಸ್ತಾವನೆ ಅಗತ್ಯ ಎಂದ ಹೈಕೋರ್ಟ್‌

ಅಧಿಕಾರಿಗಳೇ ತಮಗೆ ತೋಚಿದಂತೆ ಸೂಕ್ಷ್ಮ ವಲಯ ನಿರ್ಧರಿಸುವಂತಿಲ್ಲ; ನಿರ್ದಿಷ್ಟ ಪ್ರಸ್ತಾವನೆ ಅಗತ್ಯ ಎಂದ ಹೈಕೋರ್ಟ್‌

For Dai;y Updates Join Our whatsapp Group

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶ (KTR) ಅಥವಾ ಇತರ ಸಂರಕ್ಷಿತ ಅರಣ್ಯಗಳ ಸುತ್ತ ಯಾವುದೇ ನಿರ್ದಿಷ್ಟ ಪ್ರಸ್ತಾವನೆ ಅಥವಾ ಅಧಿಸೂಚನೆ ಇಲ್ಲದಿದ್ದರೂ, ಸ್ವಯಂಚಾಲಿತವಾಗಿ 10 ಕಿ.ಮೀ ವ್ಯಾಪ್ತಿಯನ್ನು ‘ಪರಿಸರ ಸೂಕ್ಷ್ಮ ವಲಯ’ (ESZ) ಎಂದು ಪರಿಗಣಿಸಿ ಅಧಿಕಾರಿಗಳು ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಜೋಯಿಡಾ ತಾಲೂಕಿನ ರಾಮನಗರ ಗ್ರಾಮದಲ್ಲಿ ಜೇಡಿಮಣ್ಣು ಗಣಿಗಾರಿಕೆಗೆ ಅನುಮತಿ ನಿರಾಕರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕ್ರಮವನ್ನು ಪ್ರಶ್ನಿಸಿ ಅಭಿಷೇಕ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಯಾವುದೇ ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಧಾಮದ ಸುತ್ತ 10 ಕಿ.ಮೀ ವ್ಯಾಪ್ತಿಯ ‘ಡಿಫಾಲ್ಟ್ ಪರಿಸರ ಸೂಕ್ಷ್ಮ ವಲಯ’ ಅಸ್ತಿತ್ವದಲ್ಲಿದೆ ಹಾಗೂ ಆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಗಣಿಗಾರಿಕೆ ನಿಷೇಧಿಸಲಾಗಿದೆ ಎಂಬ ಸರ್ಕಾರದ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ESZ ವ್ಯಾಪ್ತಿಯ ಕರಡು ಅಧಿಸೂಚನೆ ಪ್ರಸ್ತಾವನೆ ಸಲ್ಲಿಸಿದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳು ಹಾಗೂ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ESZ ವ್ಯಾಪ್ತಿ ಅಂತಿಮಗೊಳ್ಳಬೇಕಿದೆ. ಹೀಗಾಗಿ ಸ್ವಯಂಚಾಲಿತವಾಗಿ 10 ಕಿ.ಮೀ ವ್ಯಾಪ್ತಿಯನ್ನು ESZ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿಲ್ಲದ ESZ ಆಧರಿಸಿ ಅರ್ಜಿ ತಿರಸ್ಕಾರ

ಅಧಿಕಾರಿಗಳು ಕಾನೂನುಬಾಹಿರ ಹಾಗೂ ಅಸ್ತಿತ್ವದಲ್ಲೇ ಇಲ್ಲದ ‘ಡಿಫಾಲ್ಟ್ ESZ’ ಪರಿಕಲ್ಪನೆಯನ್ನು ಆಧರಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ 2023ರ ಜನವರಿ 5ರಂದು ಹೊರಡಿಸಲಾಗಿದ್ದ ನಿರಾಕ್ಷೇಪಣಾ ಪತ್ರ (NOC) ತಿರಸ್ಕರಿಸಿದ ಆದೇಶವನ್ನು ರದ್ದುಗೊಳಿಸಿದೆ.

ಅಲ್ಲದೇ, ಅರ್ಜಿದಾರರು ಸಲ್ಲಿಸಿರುವ ಗಣಿಗಾರಿಕೆ ಗುತ್ತಿಗೆ ಪರವಾನಗಿ ಮನವಿಯನ್ನು ಹೊಸದಾಗಿ ಪರಿಶೀಲಿಸಿ, ಅನ್ವಯವಾಗುವ ನಿಯಮಗಳ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲೇಖ

‘ಗೋವಾ ಫೌಂಡೇಶನ್’ ಮತ್ತು ‘ಟಿ.ಎನ್. ಗೋದಾವರ್ಮನ್’ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ESZಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವ ಅಥವಾ ಅಧಿಸೂಚನೆಗಳು ಜಾರಿಯಲ್ಲಿರುವ ಪ್ರದೇಶಗಳಿಗೆ ಸ್ವಯಂಚಾಲಿತವಾಗಿ 10 ಕಿ.ಮೀ ನಿಯಮ ಅನ್ವಯಿಸುವುದಿಲ್ಲ ಎಂದು ವಿವರಿಸಿದೆ.

ಅದೇ ವೇಳೆ, ದೇಶದಲ್ಲಿರುವ ನಿರ್ದಿಷ್ಟ 21 ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಧಾಮಗಳಿಗೆ ಮಾತ್ರ ಈ ರೀತಿಯ 10 ಕಿ.ಮೀ ನಿಯಮ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ (ಅಕ್ರಳಿ) ಗ್ರಾಮದ ಸರ್ವೆ ನಂಬರ್ 243/122, ಪ್ಲಾಟ್ ನಂಬರ್ 485ರಲ್ಲಿ ಒಂದು ಎಕರೆ ಜಮೀನಿನಲ್ಲಿ ಜೇಡಿಮಣ್ಣು ಗಣಿಗಾರಿಕೆ ನಡೆಸಲು ಅರ್ಜಿದಾರರು ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಗುತ್ತಿಗೆಗಾಗಿ ಮನವಿ ಸಲ್ಲಿಸಿದ್ದರು.

ಆದರೆ, ಗಣಿಗಾರಿಕೆಗೆ ಉದ್ದೇಶಿಸಿದ್ದ ಸ್ಥಳವು ಕಾಳಿ ಸಂರಕ್ಷಿತ ಪ್ರದೇಶದಿಂದ 9.5 ಕಿ.ಮೀ ದೂರದಲ್ಲಿತ್ತು. ಹೀಗಾಗಿ ಅದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ESZ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕಾರಿಗಳು ವಾದಿಸಿದ್ದರು. ಈ ಕಾರಣ ನೀಡಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿ, 2023ರ ಜನವರಿ 5ರಂದು NOC ನೀಡಲು ನಿರಾಕರಿಸಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2011ರ ಫೆಬ್ರವರಿ 9ರಂದು ಹೊರಡಿಸಿದ್ದ ಮಾರ್ಗಸೂಚಿಗಳನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಅರ್ಜಿದಾರರು ಗಣಿಗಾರಿಕೆಗೆ ಕೋರಿರುವ ಜಮೀನು ಕಾಳಿ ಹುಲಿ ಸಂರಕ್ಷಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿರುವುದರಿಂದ ಗಣಿಗಾರಿಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು.

ಆದರೆ, ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ನಿರ್ದಿಷ್ಟ ಅಧಿಸೂಚನೆ ಅಥವಾ ಪ್ರಸ್ತಾವನೆಯಿಲ್ಲದೆ 10 ಕಿ.ಮೀ ವ್ಯಾಪ್ತಿಯನ್ನು ಸ್ವಯಂಚಾಲಿತವಾಗಿ ESZ ಎಂದು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಅರ್ಜಿದಾರರಿಗೆ ಪರಿಹಾರ ಒದಗಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img