ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಚನಗಳು ಕೇವಲ ಸಾಹಿತ್ಯವಲ್ಲ, ಸಮಾನತೆ, ಕಾಯಕ, ದಾಸೋಹ, ಸತ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಜೀವನದರ್ಶನವಾಗಿವೆ ಎಂದು ಗದಗದ ಪ್ರೊ. ಎಸ್.ಯು. ಸಜ್ಜನಶೆಟ್ಟರ ಹೇಳಿದರು.
ತಾಲೂಕಿನ ಗೊಜನೂರ ಗ್ರಾಮದೇವತೆ ದೇವಸ್ಥಾನದ ಸಮುದಾಯ ಭವನದಲ್ಲಿ ಬಸವ ದಳ, ಬಸವ ಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ, ಗದಗ–ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ‘ವಚನ ಶ್ರಾವಣ–2026’ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಕುರಿತು ಅವರು ಚಿಂತನೆ ನಡೆಸಿದರು.
ಶರಣರ ವಚನಗಳು ಅನುಭವ ಮಂಟಪದಲ್ಲಿ ನಡೆದ ಚಿಂತನೆ ಹಾಗೂ ಅನುಭಾವದ ಫಲ. ಬಸವಣ್ಣನವರು ಜಾತಿ, ಮೇಲು-ಕೀಳು ಹಾಗೂ ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿ, ಶೋಷಿತರು ಮತ್ತು ದುರ್ಬಲರಿಗೆ ಗೌರವಯುತ ಬದುಕಿನ ಅವಕಾಶ ಕಲ್ಪಿಸಿದರು. ರೈತ ಬೆಳೆದ ಉತ್ಪನ್ನ ಖರೀದಿಸುವಾಗ ಜಾತಿ ಕೇಳದವರು, ಪಂಕ್ತಿಯಲ್ಲಿ ಊಟ ಮಾಡುವಾಗ ಜಾತಿ ವಿಚಾರಿಸುವುದು ಸಮಾಜದ ದ್ವಂದ್ವ ಮನೋಭಾವಕ್ಕೆ ಉದಾಹರಣೆಯಾಗಿದೆ. ಶರಣರ ಆಶಯದಲ್ಲಿ ಇಷ್ಟಲಿಂಗ ಧರಿಸಿದವರಲ್ಲಿ ಜಾತಿಗೆ ಸ್ಥಾನವಿಲ್ಲ; ಸಮಾನತೆಯೇ ಪ್ರಧಾನ ಎಂದರು.
ಒಳಗೊಂದು ಭಾವ, ಹೊರಗೊಂದು ಭಾವ ಇಟ್ಟುಕೊಂಡು ಡಾಂಭಿಕವಾಗಿ ಬದುಕದೆ ಅಂತರಂಗ–ಬಹಿರಂಗ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಲ್ಲಿ ಶರಣರ ವಿಚಾರಧಾರೆ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಅಗತ್ಯವಿದೆ. ಸರಳತೆ, ಸತ್ಯ, ಕಾಯಕ, ದಾಸೋಹ ಹಾಗೂ ಅಂತರಂಗ ಶುದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮಕ್ಕಳು ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಹಾಗೂ ಜೇಡರ ದಾಸಿಮಯ್ಯನವರ ವೇಷದಲ್ಲಿ ಭಾಗವಹಿಸಿ ಗಮನ ಸೆಳೆದರು.
ಚನ್ನವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಅಸುಂಡಿ ಪ್ರಸ್ತಾವನೆ ಮಂಡಿಸಿದರು. ಚಂದ್ರಗೌಡ ಶೇಖರಗೌಡ ದೊಡ್ಡಗೌಡ್ರ ಸ್ವಾಗತಿಸಿದರು. ಗೌರವಕ್ಕೆ ಬಡಿಗಣ್ಣವರ ವಂದಿಸಿದರು. ಬಸವರಾಜ ಸಂಶಿ ನಿರೂಪಿಸಿದರು. ಬಸವದಳದ ಶರಣೆಯರಿಂದ ಪ್ರಾರ್ಥನೆ ಹಾಗೂ ವಚನ ಮಂಗಲ ನೆರವೇರಿತು. ಶರಣರು, ಶರಣೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.



