ಇಬ್ಬರು ಸರಗಳ್ಳರ ಬಂಧನ: ಸಂಜಯ್, ಮಹ್ಮದ್ ರಫೀಕ್ ಬಂಧಿತರು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮಹಿಳೆಯೋರ್ವರ ಕತ್ತಿನಲ್ಲಿದ್ದ 98,000 ರೂ. ಬೆಲೆ ಬಾಳುವ ನಾಲ್ಕು ತೊಲಿ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀಮರನ್ನು ಕೊನೆಗೂ ಗದಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಗದಗನ ಗಂಗಾಪೂರಪೇಟೆಯ ಸಂಜಯ್ ಕೊಪ್ಪದ, ನವಲಗುಂದದ ಮಹ್ಮದರಫೀಕ್ ಹುನಗುಂದ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಬುಧವಾರ(ನ.25) ಗದಗ-ಕಳಸಾಪುರ ರಿಂಗ್ ರೋಡ್ ಹತ್ತಿರ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಮೋಟಾರ್ ಸೈಕಲ್ ಮೇಲೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಇಬ್ಬರು ಜೊತೆಗೂಡಿ ಸರ ಕಿತ್ತುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಎರಡು ತಿಂಗಳ ಹಿಂದೆ ನವಲಗುಂದದಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ಮಹ್ಮದರಫೀಕ ಒಪ್ಪಿಕೊಂಡಿದ್ದಾನೆ. ಆರೋಪಿತರಿಂದ 98,000 ಮೌಲ್ಯದ 40 ಗ್ರಾಂ. ತೂಕದ ಮಾಂಗಲ್ಯ ಸರ ಹಾಗೂ 20,000 ರೂ. ಕಿಮ್ಮತ್ತಿನ ಬೈಕ್ ಜಪ್ತಿ ಮಾಡಿದ್ದಾರೆ.

ಘಟನೆ ವಿವರ

ನಗರದ ಸರ್ವೋದಯ ಕಾಲೋನಿಯಲ್ಲಿ 2020 ಫೆಬ್ರುವರಿ 2 ರಂದು ಸಂಜೆ ಉಮಾದೇವಿ ನಲವಡಿ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರಗಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಲ್ಹಾದ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ಸಿಪಿಐ ಪಿ.ವ್ಹಿ.ಸಾಲಿಮಠ, ಪಿಎಸ್ಐ ಜಿ.ಟಿ.ಜಕ್ಕಲಿ, ಸಿಬ್ಬಂದಿಗಳಾದ ಬಿ.ಜಿ.ಹೊರಕೇರಿ, ವ್ಹಿ.ಎಸ್.ಶಟ್ಟೆಣ್ಣವರ, ಎಸ್.ಎ.ಗುಡ್ಡಿಮಠ, ಎಚ್.ಐ.ಯಡಿಯಾಪುರ ಹಾಗೂ ಪಿ.ಎಸ್.ಕಲ್ಲೂರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಎಸ್ಪಿ ಯತೀಶ್ ಎನ್. ಶ್ಲಾಘಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here