28.3 C
Gadag
Sunday, December 3, 2023

ಗ್ರಾಮ ಪಂಚಾಯತ ಚುನಾವಣೆ-2020-
ಮದ್ಯ ಅಕ್ರಮ ಸಾಗಣೆ ಮಾಡಿದರೆ ಹುಷಾರ್! ಸುರಳ್ಕರ್

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಅಬಕಾರಿ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರೊಂದಿಗೆ ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ ಚುನಾವಣೆ-2020 ರ ಪ್ರಯುಕ್ತ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸನ್ನದುದಾರರಿಗೆ ನಿರ್ದೇಶನಗಳನ್ನು ನೀಡುವುದರ ಜೊತೆಗೆ ಕೆಲ ಎಚ್ಚರಿಕೆ ನೀಡಿದರು.

ಅದರಂತೆ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ಗ್ರಾಮ ಪಂಚಾಯತ್ ಚುನಾವಣೆ-2020ರ ಪ್ರಯುಕ್ತ ಚುನಾವಣಾ ಆಯೋಗವು ಘೋಷಿಸುವ ಮದ್ಯ ಮುಕ್ತ ದಿನ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಈ ಅವಧಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟಕ್ಕೆ ಆಸ್ಪದ ನೀಡಬಾರದು. ಹಾಗೊಂದು ವೇಳೆ ಮಾಡಿದರೆ ಪರವಾನಗಿ ರದ್ದುಪಡಿಸಲಾಗುವುದು ಹುಷಾರಾಗಿರಿ ಎಂದು ಸೂಚನೆ ನೀಡಿದರು.

ಮದ್ಯ ಮಾರಾಟ ಮಳಿಗೆಗಳಿಂದ ಮದ್ಯವು ಚುನಾವಣಾ ಸಂಬಂಧ ಬಳಕೆಯಾಗದಂತೆ ಕ್ರಮ ವಹಿಸಬೇಕು. ಸನ್ನದು ಸ್ಥಳದಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ನೀಡಬಾರದು. ಮದ್ಯದ ಅಂಗಡಿಗಳಲ್ಲಿ ಮದ್ಯ ಎತ್ತುವಳಿಯು ಅಸಹಜ ಅಥವಾ ಅಸಾಧಾರಣವೆನಿಸಿದ್ದಲ್ಲಿ ಸದರಿ ಮದ್ಯದ ಅಂಡಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ನ್ಯೂನ್ಯತೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಸನ್ನದು ಸ್ಥಳ ಹೊರತುಪಡಿಸಿ ಅನಧಿಕೃತವಾಗಿ ಬೇರೆ ಸ್ಥಳಗಳಲ್ಲಿ ಮದ್ಯ ಸಂಗ್ರಹಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ವಹಿಸಬೇಕು ಎಂದು ತಿಳಿಸಿದರು.

ಮದ್ಯ ಮಾರಾಟ ಸನ್ನದುಗಳಿಗೆ ನಿಗದಿಪಡಿಸಿದ ಸಮಯಪಾಲನೆ ಮಾಡಬೇಕು. ಸಮಯ ಪಾಲನೆ ಮಾಡದೇ ಇರುವಂತಹ ಸನ್ನದುದಾರರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. ಸನ್ನದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮಾಜ ಘಾತುಕ ವ್ಯಕ್ತಿಗಳು ಮದ್ಯ ಮಾರಾಟ ಮಳಿಗೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕೃತ್ಯಗಳನ್ನು ಎಸಗದಂತೆ ಕ್ರಮ ವಹಿಸಬೇಕು. ನಿಯಮನುಸಾರ ಒಬ್ಬ ವ್ಯಕ್ತಿ ಮದ್ಯ ಖರೀದಿಸಬಹುದಾದ ಪ್ರಮಾಣಕ್ಕಿಂತಲೂ ಹೆಚ್ಚು ಮದ್ಯವನ್ನು ನೀಡಬಾರದು ಹಾಗೂ ಪದೇ ಪದೇ ಮದ್ಯವನ್ನು ಒಬ್ಬ ವ್ಯಕ್ತಿ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿ ಅಂತಹ ವ್ಯಕ್ತಿಗಳಿಗೆ ಮದ್ಯ ನೀಡದಂತೆ ಹಾಗೂ ಸದರಿ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸನ್ನದುದಾರರು ಇಲಾಖೆ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

ಕೋವಿಡ್-19 ಕೊರೋನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಿವಿಧ ಸನ್ನದುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದರೊಂದಿಗೆ ಹೆಚ್ಚು ಹೆಚ್ಚು ಜನರು ಸೇರುವಿಕೆಯನ್ನು ತಡೆಗಟ್ಟಬೇಕು. ಮಾಸ್ಕ್ನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು. ಅಬಕಾರಿ ಉಪ ಅಧೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ಅಧೀನ ಅಬಕಾರಿ ಅಧಿಕಾರಿಗಳು ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಅಬಕಾರಿ ಉಪ ಆಯುಕ್ತರು ಮಾತನಾಡಿ, ಅನಧಿಕೃತ ಮದ್ಯ ಮಾರಾಟ ಮತ್ತು ಚುನಾವಣಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಅಬಕಾರಿ ಇಲಾಖೆಯ ಇ-ಮೇಲ್ ವಿಳಾಸ : [email protected] & [email protected] ಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ಉಪಸ್ಥಿತರಿದ್ದರು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts