HomeUncategorizedಪ್ರಜಾಪ್ರಭುತ್ವ ಜಾಗೃತಿ ನನ್ನ ಕರ್ತವ್ಯ : ಪ್ರಕಾಶ್ ರಾಜ್

ಪ್ರಜಾಪ್ರಭುತ್ವ ಜಾಗೃತಿ ನನ್ನ ಕರ್ತವ್ಯ : ಪ್ರಕಾಶ್ ರಾಜ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ದೇಶದಲ್ಲಿ ಮಹಾಪ್ರಭುಗಳೊಬ್ಬರು ಓಡಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ. ಆದರೆ ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರನ್ನು ಪ್ರಶ್ನಿಸಿದರೆ ದೇಶದ್ರೋಹಿ, ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಲಾಗುತ್ತಿದೆ ಎಂದು ಚಿತ್ರನಟ ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ಗದುಗಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕುತ್ತೇವೆ ಎಂದವರೇ ಇಂದು ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಲೇ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ಕಿಡಿ ಕಾರಿದರು.

ನಾವು ಮಹಾಪ್ರಭುವನ್ನು ಆರಿಸಿದ್ದು ಮಂದಿರ ಕಟ್ಟುವುದಕ್ಕಲ್ಲ. ಆದರೂ ಮಂದಿರ ಕಟ್ಟಿದರು. ಕಟ್ಟಿಸಲಿ, ತೊಂದರೆಯಿಲ್ಲ. ಆದರೆ, ಯುವಕರಿಗೆ ನೀಡಿದ್ದ ಉದ್ಯೋಗ ಭರವಸೆ ಏನಾಯಿತು? ನೀವು ಬೇಕಾದರೆ ಚಹಾ ಮಾರಿ, ಆದರೆ ವಿದ್ಯಾವಂತ ಯುವಕರು ಏಕೆ ಪಕೋಡಾ ಮಾರಬೇಕು? 100 ಸ್ಮಾರ್ಟ್ ಸಿಟಿಗಳು ಏನಾದವು, ಸಂಸದರ ಆದರ್ಶ ಗ್ರಾಮಗಳು ಎಲ್ಲಿವೆ, ರೈತರ ಆದಾಯ ದ್ವಿಗುಣ ಏನಾಯಿತು ಎನ್ನುವ ಬಗ್ಗೆ ಜನ ಸಮುದಾಯ ಪ್ರಶ್ನೆ ಮಾಡಬೇಕು ಎಂದರು.

ನನ್ನ ತಾಯಿಯ ಊರು ಗದಗ. ಬಾಲ್ಯದಲ್ಲಿ ನಾನು ಇಲ್ಲಿಗೆ ಭೇಟಿ ನೀಡಿದ್ದೆ. ಮುಂದೆ ನನ್ನ ತಾಯಿ ಬೆಂಗಳೂರು ಸೇರಿದರು. ನಾನು ಅಲ್ಲಿಯೇ ಹುಟ್ಟಿ ಬೆಳೆದೆ. ಆದರೆ ಈಗಲೂ ನನ್ನ ತಾಯಿಯ ಸಂಬಂಧಿಕರು ಈ ಭಾಗದಲ್ಲಿ ಇದ್ದಾರೆ. ಇಲ್ಲಿಗೆ ಭೇಟಿ ನೀಡುತ್ತಿದ್ದಂತೆ ಹಳೆಯ ನೆನಪುಗಳು ಹಸಿರಾದವು ಎಂದು ಮಾತು ಆರಂಭಿಸಿದ ಪ್ರಕಾಶ್ ರಾಜ್, ಮಾತಿನುದ್ದಕ್ಕೂ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು `ಮಹಾಪ್ರಭು’ ಎಂದು ಕರೆಯುತ್ತಲೇ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಸಾಹಿತಿ ಬಸವರಾಜ ಸೂಳಿಭಾವಿ, ಅಶೋಕ ಬರಗುಂಡಿ, ಮುತ್ತು ಬಿಳಿಯಲಿ ಮುಂತಾದವರು ಉಪಸ್ಥಿತರಿದ್ದರು.

ನಾನೊಬ್ಬ ನಟನಾಗಿ ಸಮಾಜದಿಂದ ಪಡೆದ ಗೌರವಾದರಗಳನ್ನು ಮರಳಿಸುವ ಉದ್ದೇಶದಿಂದ ಪ್ರಜಾಪ್ರಭುತ್ವ ಜಾಗೃತಿ ನನ್ನ ಕರ್ತವ್ಯವಾಗಿದೆ. ಜನಸಮುದಾಯ ಯಾವತ್ತಿಗೂ ಒಂದು ವಿರೋಧ ಪಕ್ಷವೇ. ಆ ಪಕ್ಷದ ಪರವಾಗಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ. ಜನರಲ್ಲಿ ರಾಜಕೀಯ ಜಾಗೃತಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img