ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆ ಕಾಮಗಾರಿ ಕಳಪೆಯಾಗಿದ್ದು, ಸೇತುವೆ ಕಟ್ಟಡದಲ್ಲಿ ಬಸಿದ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಅಶೋಕ ಸರ್ಕಲ್-ಭಾಗ್ಯನಗರ ಕ್ರಾಸ್ ರಸ್ತೆ ಯಮದರ್ಶನ ಮಾಡಿಸುವಷ್ಟು ಭಯಾನಕವಾಗಿದೆ. ಇವುಗಳನ್ನು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕಿನ್ನಾಳ ರಸ್ತೆಯ ನಾಗರಿಕ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ಸಂಚರಿಸುವುದೆಂದರೆ ಪ್ರಾಣ ಕೈಯಲ್ಲಿಕೊಂಡು ಓಡಾಡಿದ ಅನುಭವವಾಗುತ್ತಿದೆ. ಸೇತುವೆಯುದ್ದದ ರಸ್ತೆ ಸಂಜೆಯಾದರೆ ಸಾಕು, ಕಗ್ಗತ್ತಲಿನ ಗೂಡಾಗುತ್ತದೆ. ಅಲ್ಲಿರುವ ತಗ್ಗುಗುಂಡಿಗಳು ಹಳ್ಳ-ಕೊಳ್ಳಗಳನ್ನು‌ ನಾಚಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೂಡಲೇ ರೈಲ್ವೆ‌ ಕೆಳಸೇತುವೆಯಲ್ಲಿ ಹರಿಯುತ್ತಿರುವ ಚರಂಡಿ ನೀರನ್ನು ಬಂದ್ ಮಾಡಿಸಬೇಕು, ಉತ್ತಮ ರಸ್ತೆ‌ ನಿರ್ಮಿಸಬೇಕು, ಸೇತುವೆಯ ಎರಡೂ ಬದಿಗೆ ಹೈಮಾಸ್ಕ್ ದೀಪ ಅಳವಡಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರಗತಿನಗರ, ಕಲ್ಯಾಣನಗರ ಮಾರ್ಗದ ಮೂಲಕ ಅಶೋಕ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಶೋಕ ಸರ್ಕಲ್‌ನಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಮಠ, ನಗರಸಭೆ ಸದಸ್ಯ ಮಹಾಲಕ್ಷ್ಮಿ ಕಂದಾರಿ, ಡಾ.ವಿ.ಬಿ.ರಡ್ಡೇರ್, ಯೇಸು, ಶ್ರೀಶೈಲ ಬಡಿಗೇರ, ಯಮನೂರಸಾಬ ಭೈರಾಪುರ, ಯಶವಂತಕುಮಾರ ಮೇತ್ರಿ, ಶಂಕರಗೌಡ ಮಾಲೀಪಾಟೀಲ್, ವೆಂಕಪ್ಪ ಬಾರಕೇರ, ಅರವಿಂದಗೌಡ ಪೊಲೀಸ್, ಜಿ.ಬಿ.ಪಾಟೀಲ್, ರಂಗಪ್ಪ ಹುಲ್ಲೂರು, ರವಿ ಕರಡಿ, ಮೌನೇಶ್, ರಾಘವೇಂದ್ರ ದೇಶಪಾಂಡೆ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here