ಸಂಕನೂರ ಸೈನ್ಯದೆದುರು ಕುಬೇರಪ್ಪ ಏಕಾಂಗಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿ?ತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದರೂ ಕೈ ಪಾಳಯದಲ್ಲಿ ಈಗಲೂ ಒಗ್ಗಟ್ಟು ಪ್ರದರ್ಶನವಾಗುತ್ತಿಲ್ಲ. ಹೀಗಾಗಿ ಡಾ| ಆರ್.ಎಂ. ಕುಬೇರಪ್ಪ ಏಕಾಂಗಿಯಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.
ವರ್ಷದ ಹಿಂದೆಯೇ ಕೆಪಿಸಿಸಿ ರಾಜ್ಯ ಪದವೀಧರ ಮತ್ತು ಶಿಕ್ಷಕರ ಘಟಕದ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆಯೇ ಕುಬೇರಪ್ಪ ಅವರು ಚುನಾವಣೆ ತಯಾರಿ ಆರಂಭಿಸಿದ್ದರು. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಂಚರಿಸಿ, ಪದವೀಧರ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಿದ್ದರು. ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳಲೂ ಕಾರಣರಾಗಿದ್ದರು.
ಕೈಕೊಟ್ಟ ನಾಯಕರು: ಆದರೆ ಕುಬೇರಪ್ಪ ಅವರಿಗೆ ಕಾಂಗ್ರೆಸ್ ನಾಯಕರು ಮಾತ್ರ ಸಾಥ್ ನೀಡಲಿಲ್ಲ. ಗದಗ ಮಾತ್ರವಲ್ಲದೆ ಧಾರವಾಡ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರೂ ಅವರಿಗೆ ಕೈ ಕೊಟ್ಟಿದ್ದಾರೆ. ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ ಮೇಲೂ ಕೈ ನಾಯಕರು ಕುಬೇರಪ್ಪ ಪರ ಒಗ್ಗಟ್ಟು ಪ್ರದರ್ಶಿಸದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಒಂದು ಸುತ್ತಿನ ಪ್ರಚಾರ ಪೂರ್ಣ
ಮತದಾರ ಕಾರ್ಯಕರ್ತರ ಸಮಿತಿ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಒಂದು ಸುತ್ತಿನ ಪ್ರಚಾರ ಕಾರ್ಯಪೂರ್ಣಗೊಂಡಿದೆ. ವಿಶೇ?ವಾಗಿ ರೋಣ ಮತಕ್ಷೇತ್ರದಲ್ಲಿ ಕುಬೇರಪ್ಪ ಅವರ ಪರವಾಗಿ ಸಾಕ? ಪ್ರಚಾರ ಮಾಡಲಾಗಿದೆ. ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಲಾಗುತ್ತಿದೆ.
– ಜಿ.ಎಸ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಯುವ ಘಟಕವೂ ಜತೆಗಿಲ್ಲ: ಜಿಲ್ಲಾ ಯೂತ್ ಕಾಂಗ್ರೆಸ್ ಘಟಕ ಪದವೀಧರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಪದವೀಧರರನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಶ್ರಮಿಸಬೇಕಿತ್ತು. ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿತ್ತು. ಆದರೆ ಯೂತ್ ಕಾಂಗ್ರೆಸ್ ಘಟಕ ಇದ್ಯಾವುದನ್ನೂ ಮಾಡಲೇ ಇಲ್ಲ. ಕೊನೆ ಪಕ್ಷ ನೋಂದಣಿ ಪ್ರಕ್ರಿಯೆ ಮುಗಿದ ಮೇಲಾದರೂ ಪ್ರಚಾರ ಕಾರ್ಯದಲ್ಲಿತೊಡಗಿಕೊಳ್ಳುವ ನಿರೀಕ್ಷೆಯೂ ಹುಸಿಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ಕಮಲ ಪ್ರಚಾರ ಜೋರು
ಬಿಜೆಪಿ ಅಭ್ಯರ್ಥಿ ಸಂಕನೂರ ಪರ ದೊಡ್ಡ ದೊಡ್ಡ ನಾಯಕರು ಮತಯಾಚನೆಯಲ್ಲಿ ತೊಡಗಿದ್ದಾರೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಗಣಿ, ಭೂವಿಜ್ಞಾನ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಿ.ಸಿ. ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ ಮತ್ತು ಯುವ ಮುಖಂಡ ಅನಿಲ ಮೆಣಸಿನಕಾಯಿ ಕ್ಷೇತ್ರದಲ್ಲಿದ್ದು, ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ, ರವಿ ಅವರೂ ಧಾರವಾಡ ಭಾಗದಲ್ಲಿ ಸಂಕನೂರ ಪರ ಮತ ಯಾಚಿಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಏಕಾಂಗಿಯಾಗಿ ಕ್ಷೇತ್ರದ ತುಂಬ ಓಡಾಡಿ, ಪದವೀಧರರ ಬೆಂಬಲವನ್ನು ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದರೆ. ಕಾಂಗ್ರೆಸ್ಸಿನ ಯಾವುದೇ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗದಿರುವುದು ಕುಬೇರಪ್ಪ ಏಕಾಂಗಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.

ನಾಯಕರು ಎಲ್ಲಿ?: ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಹಿರಿಯ ಕಾಂಗ್ರೆಸಿಗ ಎಚ್.ಕೆ. ಪಾಟೀಲ ಅವರು ಈ ಹಿಂದೆ ಪಶ್ಚಿಮ ಪದವೀಧರ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿದ್ದರು. ಆಗೆಲ್ಲ ಜಿಲ್ಲೆಯ ಕೈ ನಾಯಕರು ಆಸಕ್ತಿಯಿಂದ ಚುನಾವಣೆಯಲ್ಲಿ ಭಾಗವಹಿಸಿ, ಎಚ್.ಕೆ. ಪಾಟೀಲ ಗೆಲುವಿಗೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಆ ಉತ್ಸಾಹ ಕುಬೇರಪ್ಪ ಅವರ ಸ್ಪರ್ಧೆಯ ವಿಷಯದಲ್ಲಿ ಕಾಣುತ್ತಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಪಾಟೀಲ ಹಾಗೂ ಕುಬೇರಪ್ಪ ಅವರ ಆಪ್ತ ಪ್ರೊ| ಹನುಮಂತಗೌಡ ಕಲ್ಮನಿ ಇವರನ್ನು ಹೊರತುಪಡಿಸಿ ಜಿಲ್ಲೆಯ ಕಾಂಗ್ರೆಸ್ ಮಾಜಿ ಶಾಸಕರು, ಮುಖಂಡರು ಕುಬೇರಪ್ಪ ಪರವಾಗಿ ಗಂಭೀರವಾಗಿ ಚುನಾವಣೆ ಎದುರಿಸುವ ಎದೆಗಾರಿಕೆ ಪ್ರದರ್ಶಿಸುತ್ತಿಲ್ಲ. ಪ್ರಚಾರಕ್ಕೂ ಬರುತ್ತಿಲ್ಲ.

ಉತ್ಸಾಹ ಇದೆ
ಯೂತ್ ಕಾಂಗ್ರೆಸ್ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದೆ. ಎಚ್.ಕೆ. ಪಾಟೀಲ ಅವರು ಸ್ಪರ್ಧಿಸುತ್ತಿದ್ದ ಸಂದರ್ಭದಲ್ಲಿ ಇದ್ದ ಉತ್ಸಾಹ ಈಗಲೂ ಇದೆ.
-ಅಶೋಕ ಮಂದಾಲಿ, ಯೂತ್ ಕಾಂಗ್ರೆಸ್ ಅಧ್ಯಕ್ಷ


Spread the love

LEAVE A REPLY

Please enter your comment!
Please enter your name here