ವಿರೋಧ ಪಕ್ಷಗಳು ಒಂದು ಸಮುದಾಯದೊಂದಿಗೆ ನಿತ್ಯ ಬೆಂಕಿ ಹಚ್ಚುವ ಕೆಲಸ ಬಿಡಬೇಕು: ಎ. ನಾರಾಯಣ ಸ್ವಾಮಿ ಕಟುನುಡಿ
ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ
ಶಿವಮೊಗ್ಗದಲ್ಲಿ ಸೋಮವಾರ ಪ್ರೇಮ್ ಸಿಂಗ್ ಮೇಲಿನ ಹಲ್ಲೆಯು ದುರದೃಷ್ಟಕರ ಸಂಗತಿ. ಆತ ಶಿವಮೊಗ್ಗ ಜಿಲ್ಲೆಯವನಲ್ಲ. ಹೊಟ್ಟೆಪಾಡಿಗಾಗಿ ಬೇರೆ ರಾಜ್ಯದಿಂದ ಶಿವಮೊಗ್ಗಕ್ಕೆ ಬಂದಿರುವ ಹುಡುಗ. ಕೇವಲ ಹಣೆಗೆ ಕುಂಕುಮ ಇಟ್ಟಿದ್ದಾನೆ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದಿರುವ ಕಿಡಿಗೇಡಿಗಳ ಕೃತ್ಯ ಸಹಿಸುವಂಥದ್ದಲ್ಲ. ಈ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಘಟನೆಯನ್ನು ಖಂಡಿಸಿದ್ದಾರೆ.
ಮಂಗಳವಾರ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಒಂದು ಕೋಮಿನವರಿಂದ ಪದೇ ಪದೇ ಇಂಥ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ಹಿಂದೂಗಳ ಮೇಲೆ ಈ ರೀತಿ ಚಾಕು ಇರಿತ, ಹಲ್ಲೆ, ಕೊಲೆ ಪ್ರಯತ್ನಗಳು ನಡೆಯುತ್ತಿರುವದು ಅಭಿವೃದ್ಧಿಗೆ ಮಾರಕವಾಗಿದೆ.
ರಾಜ್ಯದಲ್ಲಿ ಹಿಂದೂ ಮತ್ತು ಅಲ್ಪಸಂಖ್ಯಾತರ ನಡುವೆ ಸಾಮರಸ್ಯ ಇಲ್ಲವೆಂಬುದನ್ನು ಇಂಥ ಘಟನೆಗಳು ಪದೇ ಪದೇ ಬಿಂಬಿಸಹೊರಟಿದ್ದೀರಿ. ನೀವು ವಾಸಿಸುತ್ತಿರುವುದು ಭಾರತ ದೇಶದಲ್ಲಿ. ಇಲ್ಲಿ ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳದಿದ್ದರೆ, ನಿಮ್ಮ ಅಭಿವೃದ್ಧಿಗೇ ಇದು ಮಾರಕವಾಗುತ್ತದೆ ಎಂದು ಎ. ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಶಿವಮೊಗ್ಗ ಜಿಲ್ಲಾದ್ಯಂತ ವಾಸಿಸುತ್ತಿರುವ ಅಲ್ಪಸಂಖ್ಯಾತರ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಯಾವ ಊರಿನಿಂದ ಬಂದಿರುವವರು, ಇವರ ವ್ಯವಹಾರ-ಕೆಲಸಗಳೇನು ಎಂಬುದರ ಕುರಿತು ಪ್ರತಿಯೊಬ್ಬರ ಸ್ಪಷ್ಟ, ಸಂಪೂರ್ಣ ಮಾಹಿತಿಯನ್ನು ಪಡೆದು ಎಲ್ಲರಿಗೂ ಎಚ್ಚರಿಕೆ ನೀಡುವಂತೆ ಚರ್ಚೆಸಿದ್ದೇನೆ. ಇಂತಹವರ ವಿರುದ್ಧ ಕೇವಲ 107 ಕೇಸು ದಾಖಲಿಸುವುದು ಪರಿಹಾರವಲ್ಲ. 144 ಸೆಕ್ಷನ್ ಜಾರಿಯಿದ್ದಾಗ 107 ಕೇಸ್ ಹಾಕುವುದು ಸರಿ. ಆದರೆ, ಇಂಥವರನ್ನು ಗಡಿಪಾರು ಮಾಡಬೇಕಿದೆ.
ಇಂಥ ಪ್ರಕರಣಗಳಲ್ಲಿ ಹಿಂದೂ, ಅಲ್ಪಸಂಖ್ಯಾತ ಅಥವಾ ಇನ್ನಾರೇ ಆಗಿರಲಿ, ಸಮಾಜದ ಶಾಂತಿ ಕದಡುವ ಚಿಂತನೆಯಿರುವ ಯಾವ ವ್ಯಕ್ತಿಯನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಇಟ್ಟುಕೊಳ್ಳಬೇಡಿ. ತಕ್ಷಣವೇ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಬಿಸಾಕಿ ಎಂದು ಆದೇಶಿಸಿರುವದಾಗಿ ಸಚಿವ ನಾರಾಯಣಸ್ವಾಮಿ ಹೇಳಿದರು.
ಪ್ರೇಮ್ ಸಿಂಗ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದೆ. ಚಾಕು ಇರಿತದಿಂದ ದೊಡ್ಡಕರುಳಿಗೆ ಹೆಚ್ಚಿನ ಗಾಯವಾಗಿದೆ. ಇಲ್ಲಿ ಬಂದು ನೋಡಿದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇಗ ಗುಣಮುಖರಾಗುತ್ತಾರೆ, ಹೆದರುವುದು ಬೇಡ ಎಂದು ಕುಟುಂಬದವರಿಗೆ ಧೈರ್ಯ ತುಂಬಿ ಬಂದಿದ್ದೇನೆ.
ಮದರಸಾಗಳಲ್ಲಿ ಸಂಸ್ಕಾರ ಕಲಿಸುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ಇಂತಹ ಘಟನೆಗಳನ್ನು ಮುಖಂಡರು, ಮೌಲ್ವಿಗಳು, ಹಿರಿಯರು ಗಮನಿಸಿ ಬುದ್ಧಿ ಹೇಳುವ ಕೆಲಸ ಮಾಡಬೇಕಿದೆ. ಶಾಂತಿ ಕದಡುವ ಕೆಲಸಗಳಿಗೆ ಮುಂದಾದಾಗ ನಾವು ಶಾಂತಿ-ಸೌಹಾರ್ದತೆಯಿಂದ ಬದುಕುವುದು ಕಷ್ಟವಾಗುತ್ತದೆ ಎಂದು ತಿಳಿಹೇಳಬೇಕು. ಎಲ್ಲವೂ ಕೂಡ ಸಂವಿಧಾನದ ಮೇಲೆಯೇ ನಡೆಯುತ್ತದೆ. ಹೊರತಾಗಿ ಯಾವುದೇ ಒಂದು ಜಾತಿ-ಸಮುದಾಯಕ್ಕಾಗಿ ಸರ್ಕಾರ ಇರುವುದಿಲ್ಲ. ಎಲ್ಲಾ ಸರ್ಕಾರವೂ ಕೂಡ ಸಂವಿಧಾನಿಕವಾಗಿ ನಡೆಯುತ್ತದೆ.
ಎಲ್ಲರಿಗೂ ಸಂವಿಧಾನದ ಹಕ್ಕನ್ನು ಕೊಟ್ಟು ಸರ್ಕಾರ ಆಡಳಿತ ನಡೆಸುತ್ತಿದೆ. ಎಸ್ಡಿಪಿಐ, ಪಿಎಫ್ಐ ನಿಷೇಧದ ಬಗ್ಗೆ ಚರ್ಚೆಸುತ್ತಿದ್ದೇವೆ. ಪುನಃ ಯಾವುದೇ ಕಾರಣಕ್ಕೂ ಈ ಸಂಘಟನೆಗಳು ಮರುನಿರ್ಮಾಣವಾಗದಂತಹ ಕಾನೂನುಗಳೇನಾದರೂ ಇದೆಯೇ ಎಂದು ಪರಿಶೀಲಿಸಲಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಥಹ ಸಂಘಟನೆಗಳನ್ನು ನಿಷೇಧಿಸಿಯೇ ಸಿದ್ಧ ಎಂದು ಪ್ರತಿಕ್ರಿಯಿಸಿದರು.
ವಿರೋಧ ಪಕ್ಷಗಳು ಒಂದು ಸಮುದಾಯದೊಂದಿಗೆ ನಿತ್ಯ ಬೆಂಕಿ ಹಚ್ಚುವ ಕೆಲಸ ಬಿಡಬೇಕು. ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಶಾಂತಿ ಕದಡುವ ಕೆಲಸವನ್ನು ಮಾಡಬಾರದು. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳುತ್ತಿರುವವರು ಯಾರು? ಕಾಂಗ್ರೆಸ್ ಪಕ್ಷದವರು. ಇಂತಹ ಕೆಲಸಗಳ ಹಿಂದೆ ಕಾಂಗ್ರೆಸ್ನವರು ಇಲ್ಲ ಎಂದು ಹೇಳುವಂತಿಲ್ಲ. ಬುದ್ಧಿ ಹೇಳುವುದನ್ನು ಬಿಟ್ಟು, ಸಾವರ್ಕರರನ್ನು ವಿರೋಧಿಸುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಇನ್ಯಾರೂ ಅಲ್ಲ.
ಇಂದು ಹಳ್ಳಿಯಿಂದ ದಿಲ್ಲಿಯವರೆಗೂ, ದೇಶದ ತುದಿಯ ಜಮ್ಮು-ಕಾಶ್ಮೀರದಲ್ಲೂ ತ್ರಿವರ್ಣಧ್ವಜ ಹಾರಾಡುತ್ತಿದೆ. ಇವರ ಕಾಲದಲ್ಲಿ ಎಂದಾದರೂ ಹಾರಿತ್ತಾ? ಇದು ಮೋದಿಜೀ ಮಾಡಿದ ಕೆಲಸ. ಆರ್ಟಿಕಲ್ 370 ರದ್ದು ಮಾಡಿರುವುದು ದೇಶದ ಜನತೆಗೆ ಒಳ್ಳೆಯದಾಗಿದೆ ಎಂಬಂಶ ಅರ್ಥ ಆಗುವವರಿಗೆ ಆಗಿದೆ ಎಂದು ಹೇಳಿದರು.