ವಿಜಯಸಾಕ್ಷಿ ಸುದ್ದಿ, ತುಮಕೂರು
ವಿದ್ಯುತ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ನಡುವೆ ಜಟಾಪಟಿ ನಡೆದು, ಪರಸ್ಪರ ಕೈ ಕೈ ಮಿಲಾಸುವ ಹಂತ ತಲುಪಿದ ಘಟನೆ ನಡೆಯಿತು.
ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಇಬ್ಬರು ನಾಯಕರು ಪರಸ್ಪರ ಏಕವಚನದಲ್ಲಿ ಮಾತಿನ ಚಕಮಕಿ ನಡೆಸಿದರು.
ಸಂಸದ ಬದವರಾಜು ಮಾತನಾಡುತ್ತ, ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು 550 ಕೋಟಿ ರೂಪಾಯಿ ತಂದಿದ್ದೇನೆ, ರೈತರಿಗೆ ಎಕರೆಗೆ ಒಂದು ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದರಿಂದ ಆಕ್ರೋಶಗೊಂಡ ಜೆಡಿಎಸ್ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ ? ವಯಸ್ಸಾಗಿದೆ ಈಗಲಾದರೂ ನ್ಯಾಯಯುತ ಹೇಳಿಕೆ ನೀಡಬಾರದೇ? ಎಂದು ಪ್ರಶ್ನಿಸಿದರು.
ಇದರಿಂದ ಸಿಟ್ಟಾದ ಸಂಸದ ಬಸವರಾಜು, ಶಾಸಕ ಶ್ರೀನಿವಾಸರಿಗೆ ಏಕವಚನದಲ್ಲೇ ಮಾತಿನ ಚಾಟಿ ಬೀಸಿದರು. ಇಬ್ಬರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದನ್ನು ಕಂಡ ಜನರು ಕೆಲ ಕ್ಷಣ ದಂಗಾಗಿ ಹೋದರು.



