ವಿಜಯಸಾಕ್ಷಿ ಸುದ್ದಿ, ಹೈದರಾಬಾದ್
ಇತ್ತೀಚೆಗಷ್ಟೇ ನಟ ಸಂಚಾರಿ ವಿಜಯ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲಿಯೇ ಟಾಲಿವುಡ್ ನ ಮತ್ತೊಬ್ಬ ನಟ ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟ ಕತ್ತಿ ಮಹೇಶ್ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಚಿತ್ತೂರಿನಿಂದ ಹೈದರಾಬಾದ್ ಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಇನ್ನೊವಾ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟನಾಗಿ ಮಾತ್ರವಲ್ಲದೆ, ವಿಮರ್ಶಕನಾಗಿ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ -1ರ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು. ನೆಲ್ಲೂರಿನ ಹೊರ ವಲಯದ ಚಂದ್ರಶೇಖರಪುರಂ ಬಳಿ ಮಹೇಶ್ ಚಲಿಸುತ್ತಿದ್ದ ಕಾರು ಶುಕ್ರವಾರ (ಏ.25)ರಂದು ಅಪಘಾತವಾಗಿದೆ.
ಸರಿಯಾದ ಸಮಯಕ್ಕೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅವರಿಗೆ ಮಾರಣಾಂತಿಕ ಗಾಯಗಳಾಗುವುದು ತಪ್ಪಿದೆ ಎನ್ನಲಾಗಿದೆ. ಆದರೂ ಅವರಿಗೆ ಸದ್ಯಕ್ಕೆ ಪ್ರಜ್ಞೆ ಬಂದಿಲ್ಲ ಎಂದು ವರದಿ ತಿಳಿದು ಬಂದಿದೆ.
ಕಾರು ಜಖಂ ಆಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕಿರುಚಿತ್ರಗಳ ಮೂಲಕ ಮಹೇಶ್ ವೃತ್ತಿ ಜೀವನ ಆರಂಭಿಸಿದ್ದರು. ನೇನೆ ರಾಜು ನೇನೆ ಮಂತ್ರಿ, ಕ್ರ್ಯಾಕ್, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.