ವಿಜಯಸಾಕ್ಷಿ ಸುದ್ದಿ, ನರಗುಂದ
ರಾತ್ರಿ ಸಮಯದಲ್ಲಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಖದೀಮರನ್ನು ಸ್ಥಳೀಯರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನರಗುಂದದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಿಲ್ಲೆಯ ನರಗುಂದ ಪಟ್ಟಣದ ಮೆಣಸಿನಕಾಯಿಯವರ ಓಣಿಯಲ್ಲಿ ಯುವಕರಿಬ್ಬರು ಅತ್ತಿಂದಿತ್ತ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದರು. ಈ ಅಪರಿಚಿತ ಯುವಕರ ಚಲನವಲನಗಳನ್ನು ಗಮನಿಸಿದ ಸ್ಥಳೀಯರು, ಅಲ್ಲಿಯೇ ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ.
ಒಂದಕ್ಕೂ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಇನ್ನಷ್ಟು ಅನುಮಾನಗೊಂಡ ಸಾರ್ವಜನಿಕರು ಅವರು ಓಡಾಡುತ್ತಿದ್ದ ಸ್ಥಳದ ಮನೆಗಳನ್ನು ಪರಿಶೀಲಿಸಿದಾಗ ಯಾವುದೋ ಕಬ್ಬಿಣದ ವಸ್ತುವಿನಿಂದ ಮನೆಯೊಂದರ ಬಾಗಿಲಿನ ಬೀಗದ ತಟ್ಟೆಯನ್ನು ಒಡೆಯಲು ಪ್ರಯತ್ನಿಸಿರುವ ಅನುಮಾನ ವ್ಯಕ್ತವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಹಿಡಿದು ಥಳಸಿ ನರಗುಂದ ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.
ಯುವಕರಲ್ಲಿ ಒಬ್ಬ ಬಾಗಲಕೋಟೆ ಮೂಲದ ಕಿರಣ್ ಎಂದು ಪತ್ತೆಯಾಗಿದ್ದು, ಈತನೊಂದಿಗಿದ್ದ ಇನ್ನೊಬ್ಬ ಅಪ್ರಾಪ್ತ ವಯೋಮಾನದ ಹುಡುಗನೆಂದು ತಿಳಿದುಬಂದಿದೆ. ಇವರು ಎಲ್ಲಿಯವರು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಣವೇನೆಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.