ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಕಾಂಗ್ರೆಸ್- ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ಇಬ್ಬರೂ ಜನತೆಯ ದುಡ್ಡನ್ನು ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದ ಜನತೆ ಎರಡೂ ಪಕ್ಷಗಳಿಗೆ ಪಾಠ ಕಲಿಸಲು ಮನಸ್ಸು ಮಾಡಬೇಕಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ಜೆಡಿಎಸ್- ಬಿಜೆಪಿ ಮಧ್ಯೆ ಹೋರಾಟ ಇದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಕುಮಾರಸ್ವಾಮಿ ಕಾಲು ಕೆರೆದು ಜಗಳಕ್ಕೆ ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಕಾಲು ಕೆರೆದುಕೊಂಡು ಬರೋಕೆ ನನಗೆ ಬೇರೆ ಕೆಲಸ ಇಲ್ವಾ ? ಅವರು ನನ್ನ ಸುದ್ದಿಗೆ ಬರದೆ ಇದ್ದರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ. ಕಾಂಗ್ರೆಸ್ ನಾಯಕರ ರೀತಿ ವೈಯಕ್ತಿಕವಾಗಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದರು.
ಪುಟಗೋಸಿ ವಿರೋಧ ಪಕ್ಷದ ಸ್ಥಾನ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಿಎಂ, ವಿರೋಧ ಪಕ್ಷದ ಸ್ಥಾನಕ್ಕೆ ಗೌರವ ಕೊಡುತ್ತೇನೆ. ಆದರೆ, ಆ ಸ್ಥಾನದಲ್ಲಿರುವ ಸಿದ್ದರಾಮಯ್ಯ ನಡವಳಿಕೆ ಬಗ್ಗೆ ನಾನು ಮಾತಾಡಿದ್ದೇನೆ ಎಂದ ಅವರು, ಜಮೀರ್ ಬಗ್ಗೆ ನಾನು ಚರ್ಚೆ ಮಾಡಲ್ಲ. ದೇವರಿದ್ದಾನೆ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.