ಗದಗ: ಮುಂಗಾರು ಬಿತ್ತನೆ ಚಟುವಟಿಕೆಗಳು ವೇಗ ಪಡೆದಿರುವ ನಡುವೆಯೇ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳ ಕೊರತೆಯಿಂದ ಗದಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯೂರಿಯಾ ಪಡೆಯಲು ರೈತರು ಮುಂಜಾನೆ 5 ಗಂಟೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಗದಗ ನಗರದಲ್ಲಿ ಕಂಡು ಬಂದಿದೆ.
ಗದಗ ನಗರದ ಡಂಬಳ ನಾಕಾ ಬಳಿಯ ಶ್ರೀ ಎಂಟರ್ಪ್ರೈಸಸ್ ಮುಂಭಾಗ ನೂರಾರು ರೈತರು ಯೂರಿಯಾ ರಸಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದು, ತಮ್ಮ ಸರದಿ ಕಾಯ್ದಿರಿಸಲು ಚಪ್ಪಲಿ, ಹೆಲ್ಮೆಟ್ ಹಾಗೂ ಟಾವೆಲ್ಗಳನ್ನು ಇಟ್ಟು ಪಾಳೆ ಹಚ್ಚಿರುವ ದೃಶ್ಯ ಗಮನ ಸೆಳೆಯಿತು.
ಹೆಸರು, ಗೋವಿನಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಸಜ್ಜಾಗಿರುವ ರೈತರು ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ. ಎಫ್ಐಡಿ (FID) ವ್ಯವಸ್ಥೆಯ ಮೂಲಕ ರಸಗೊಬ್ಬರ ವಿತರಣೆ ನಡೆಯುತ್ತಿದೆಯಾದರೂ, ದಿನಕ್ಕೆ ಕೇವಲ 30 ರೈತರಿಗೆ ಮಾತ್ರ ಯೂರಿಯಾ ನೀಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವಿತರಣೆ ನಡೆಯುತ್ತಿರುವುದರಿಂದ ದೂರದ ಊರುಗಳಿಂದ ಬಂದ ರೈತರು ದಿನಪೂರ್ತಿ ಕಾಯುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗುತ್ತಿದ್ದು, ರೈತರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ರಸಗೊಬ್ಬರ ಕೊರತೆಗೆ ಅಂಗಡಿ ಮಾಲೀಕರು ಹಾಗೂ ಕೃಷಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ರೈತರು, ಕೂಡಲೇ ಅಗತ್ಯ ಪ್ರಮಾಣದ ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಪೂರೈಸುವ ಮೂಲಕ ರೈತರ ಸಂಕಷ್ಟ ನಿವಾರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಬಿತ್ತನೆ ಸಮಯದಲ್ಲಿ ರಸಗೊಬ್ಬರಕ್ಕಾಗಿ ಹೀಗೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ದಿನಗಟ್ಟಲೆ ಅಲೆದರೂ ಗೊಬ್ಬರ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮರ್ಪಕ ಪೂರೈಕೆ ಮಾಡಬೇಕು” ಎಂದು ರೈತರು ಆಗ್ರಹಿಸಿದ್ದಾರೆ.



