ವಿಜಯಸಾಕ್ಷಿ ಸುದ್ದಿ, ಗದಗ
‘ಒಂದು ದೇಶ ಒಂದು ಚುನಾವಣೆ’ ಎನ್ನುವುದು ದೇಶದ ಆಡಳಿತ ಹಾಗೂ ಅರ್ಥಿಕ ದೃಷ್ಟಿಯಿಂದ ಒಳ್ಳೆಯದ್ದು. ಇಂತಹದರ ಕುರಿತು ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸುವುದನ್ನು ಬಿಟ್ಟು ಸಾಧಕ ಬಾಧಕ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ರವಿವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸದನದಲ್ಲಿ ಚರ್ಚಿಸಲು ಸ್ಪೀಕರ್ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಆದರೆ, ಚರ್ಚೆ ಮಾಡದೇ ಪ್ರತಿಭಟಿಸುತ್ತಿದ್ದಾರೆ. ಚರ್ಚೆ ಅಂದರೆ ಓಡಿ ಹೋಗುವವರು
ಸದನ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
‘ಒಂದು ದೇಶ ಒಂದು ಚುನಾವಣೆ’ ಇವತ್ತಿನ ಕಾನೂನಲ್ಲ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೂ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಲಾ ಕಮಿಷನ್ ಕೂಡಾ ಉಲ್ಲೇಖಿಸಿ 2018 ರಲ್ಲಿ ಡ್ರಾಪ್ ರಿಪೋರ್ಟ್ ಸಲ್ಲಿಸಿದೆ ಎಂದು ತಿಳಿಸಿದ ಅವರು,
ಗ್ರಾಮ ಪಂಚಾಯತಿಯಿಂದ ಸಂಸತ್ ವರೆಗೂ ಒಂದೇ ಚುನಾವಣೆ ಮಾಡಿದರೆ ಅದು ಆರ್ ಎಸ್ ಎಸ್ ಅಜೆಂಡಾ ಹೇಗಾಗುತ್ತೆ? ಎಂದರು.
ದೇಶದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುತ್ತದೆಯೋ, ಎಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಇದೆಯೋ ಅಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕಾಂಗ್ರೆಸ್ ತನ್ನ ಹಳೆಯ ಚಾಳಿ ಮುಂದುವರೆಸಿದೆ. ದೇಶದಲ್ಲಿ ಕಾಂಗ್ರೆಸ್ ಹೀನಾಯ ಪರಸ್ಥಿತಿಗೆ ತಲುಪಿದೆ. ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದೆ. ಆದರೆ ಹಳೆ ಚಾಳಿ ಮುಂದುವರಿಸಿದರೆ ಜನರು ನಂಬುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಜಿ ಸಿಎಂ ಸಿದ್ರಾಮಯ್ಯ ಜೋಡೆತ್ತು ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅವರು ಜೋಡೆತ್ತಲ್ಲ ಬಯಲಿನಲ್ಲಿ ಹೊಡೆದಾಡಲು ಬಿಟ್ಟಿರುವ ಹೋರಿಗಳು. ಇವನ್ನು ಎದುರಿಸುವ ಶಕ್ತಿ ಬಿಜೆಪಿಗಿದೆ ಎಂದು ಕಾಂಗ್ರೆಸ್ ನಾಯಕರಿಬ್ಬರಿಗೂ ಸಚಿವರು
ತಿರುಗೇಟು ನೀಡಿದರು.
ಸಿಎಂ ಯಡಿಯೂರಪ್ಪ ಅವರು ೮ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಾಳೆಯ ಬಜೆಟ್ ಕೈಗಾರಿಕೆ, ಕೃಷಿ, ಆರೋಗ್ಯ, ಐಟಿಬಿಟಿ ಹಾಗೂ ಶಿಕ್ಷಣ ವಲಯಗಳಿಗೆ ಹೆಚ್ಚಿನ ಆದ್ಯತೆ ಇರಲಿದೆ. ಕೊರೊನಾ ಬಳಿಕ ಮಂಡಿಸುತ್ತಿರುವ ಆಯವ್ಯಯದ ಮೇಲೆ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೇ, ನಾಳೆಯ ಬಜೆಟ್ ನಲ್ಲಿ ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ ಯುವಕರಿಗೆ ಪೂರಕ ಬಜೆಟ್ ಮಂಡಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.