ತುಂಗಭದ್ರೆ ತಟದಲ್ಲಿ ಅಕ್ರಮ ಮರಳು ದಾಸ್ತಾನು: ಕೋಟ್ಯಾಂತರ ರೂ. ಮೌಲ್ಯದ ಮರಳು ಜಪ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ

Advertisement

ತಾಲೂಕಿನ ತುಂಗಭದ್ರೆ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಅಪಾರ ಪ್ರಮಾಣದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಮರಳು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದ ಮರಳು ಬ್ಲಾಕ್ ಗಳು ಇದ್ದಾಗಲೂ ಸಹ, ಶಿಂಗಟಾಲೂರ ಮತ್ತು ಸುತ್ತಮುತ್ತಲಿನ ಗ್ರಾಮದ ಕೆಲ ಖದೀಮರು ರಾಜಾರೋಷವಾಗಿ ತುಂಗಭದ್ರೆಯ ಒಡಲು ಬಗೆದು ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡಿದ್ದರು.

ಈ ಬಗ್ಗೆ ಮಾಹಿತಿ ಆಧರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಆಶಪ್ಪ ಪೂಜಾರ ಹಾಗೂ ಪೊಲೀಸ್ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಿಂದಿ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಕೋಟ್ಯಾಂತರ ರೂ. ಮೌಲ್ಯದ ಮರಳನ್ನು ಶಿಂಗಟಾಲೂರ ಗ್ರಾಮದ ವ್ಯಾಪ್ತಿಯ ಹಲವು ಕಡೆಗಳಲ್ಲಿ ದಾಳಿ ನಡೆಸಿ, ಸುಮಾರು 100 ಟಿಪ್ಪರ್ ಮರಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಾಗಲ್ಲ

ತುಂಗಭದ್ರಾ ನದಿ ತೀರದಿಂದ ಯಾರೂ ಬೇಕಾದರೂ ಹೀಗೆ ಮರಳು ತೆಗೆದು ದಾಸ್ತಾನು ಮಾಡಿಕೊಳ್ಳಬಹುದು. ಮಾರಿಕೊಳ್ಳಬಹುದು. ಅಧಿಕಾರಿಗಳು ಸಹ ನಿಯಮಿತವಾಗಿ ದಾಳಿ ನಡೆಸಿ ಅಕ್ರಮ ದಾಸ್ತಾನು ವಶಪಡಿಸಿಕೊಳ್ಳುತ್ತಲೆ ಇರುತ್ತಾರೆ. ಆದರೆ ಯಾರ ಮೇಲೂ ದೂರು ದಾಖಲಾಗುವುದಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಮರಳ್ಳುಗಳ್ಳರು ದಾಳಿ ನಂತರ ಮತ್ತೆ ತುಂಗಭದ್ರೆಯ ಒಡಲಿಗೆ ಕೈ ಹಾಕುತ್ತಾರೆ. ಅಧಿಕಾರಿಗಳು ಬಂದು ಮರಳು ತೆಗೆದುಕೊಂಡು ಹೋಗುತ್ತಾರೆ. ಒಟ್ಟಿನಲ್ಲಿ ಇದೊಂದು ಆಡೋಣ ಬಾ… ಕೆಡಿಸೋಣ ಬಾ ಎನ್ನುವುದು ದಾಳಿಯ ಉದ್ದೇಶ ಇರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಅಕ್ರಮ ಮರಳು ದಾಸ್ತಾನಿನ ಮಾಹಿತಿ ಇರುವ ಅಧಿಕಾರಿಗಳಿಗೆ ಅದನ್ನು ಸಂಗ್ರಹಿಸುವ ವ್ಯಕ್ತಿಯ ಮಾಹಿತಿಯೂ ಇರುತ್ತದೆ. ಆದರೂ ಯಾರ ಮೇಲೆಯೂ ದೂರು ದಾಖಲಾಗದಿರುವ ಹಿಂದೆ ರಾಜಕೀಯ ಉದ್ದೇಶ ಅಡಗಿದೆ. ಕೆಲ ಪ್ರಭಾವಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಅಂಥವರ ಮೇಲೆ ದೂರು ದಾಖಲಾಗುವುದೇ ಇಲ್ಲ. ಒಟ್ಟಾರೆ ಇದೊಂದು ನಾಟಕ ಅಷ್ಟೆ ಎನ್ನುತ್ತಾರೆ ಶಿಂಗಟಾಲೂರಿನ ಕೆಲವು ಗ್ರಾಮಸ್ಥರು.

ಜಿಲ್ಲೆಯ ಮಟ್ಟಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದ ದಾಳಿಯಲ್ಲಿ ಅಪಾರ ಪ್ರಮಾಣದ ಮರಳು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ ಸುಂದರೇಶ ಬಾಬು ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸಹ ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here