ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ ಕಳಸಾಪುರ ರಸ್ತೆಯ ಬ್ರೈಟ್ ಹಾರಿಜೋನ್ ಶಾಲೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಗದಗ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಸೆಟ್ಲಮೆಂಟ್ ನಿವಾಸಿ ಸುರೇಶ್ ಕಾಳೆ, ರಾಮನಗರದ ದೇವರಾಜ್ ವಿಭೂತಿ, ಬೆಟಗೇರಿಯ ವಾಸೀಂ ಈಟಿ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಇನ್ನು ಬಂಧಿತರಿಂದ ಸುಮಾರು 26 ಸಾವಿರ ರೂ.ಮೌಲ್ಯದ 868 ಗ್ರಾ. ಗ್ರಾಂಜಾ ವಶಪಡಿಸಿಕೊಳ್ಳಲಾಗಿದೆ.
ಈ ಮೂವರು ಸೇರಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿಎಸ್ಪಿ ಶಿವಾನಂದ ಪವಾಡಶೆಟ್ಟರ, ಇನ್ಸ್ಪೆಕ್ಟರ್ ಆರ್.ಎಸ್.ಕಪ್ಪತನವರ ಮಾರ್ಗದರ್ಶನದಲ್ಲಿ ಪಿಎಸ್ಐ ಅಜಿತಕುಮಾರ್ ಹೊಸಮನಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಎನ್.ಎ.ಮೌಲ್ವಿ, ಪಿ.ಎಸ್.ಗಾಣಿಗೇರ, ಎಲ್.ಬಿ.ಪೂಜಾರ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿಬ್ಬಂದಿಗಳ ಈ ಕಾರ್ಯಾಚರಣೆಗೆ ಎಸ್ಪಿ ಯತೀಶ್ ಎನ್ ಶ್ಲಾಘಿಸಿದ್ದಾರೆ.