ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮಾನವೀಯ ಮೌಲ್ಯಗಳ ರತ್ನದಂತಿರುವ ದೇವರ ದಾಸಿಮಯ್ಯನವರ ವಚನಗಳು ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಯುವ ಜನಾಂಗಕ್ಕೆ ದಾರಿ ದೀಪವಾಗಿವೆ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ನಿಮಿತ್ತ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರ ದಾಸಿಮಯ್ಯನವರು ತಮ್ಮ ನೇಕಾರಿಕೆ ವೃತ್ತಿ ಬದುಕಿನ ಜತೆಗೆ ಸಾಮಾಜಿಕ ಕಳಕಳಿ ಹೊಂದಿ, ವಚನ ಸಾಹಿತ್ಯ ರಚಿಸುವ ಮುಖಾಂತರ ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಶ್ರಮಿಸಿದ ಅಗ್ರಗಣ್ಯರು. ಯುವ ಸಮೂಹ ಹಾಗೂ ನಾವೆಲ್ಲರೂ ದೇವರ ದಾಸಿಮಯ್ಯನವರ ವಚನಗಳನ್ನು ಓದುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ಮಾತ್ರ ಜಯಂತಿಗಳ ಆಚರಣೆಗೆ ನಿಜಾರ್ಥ ಬರಲಿದೆ ಎಂದರು.
ಪ್ರಭು ಶೆಲ್ಲೆದ ಮಾತನಾಡಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರೂ ಸಮಾನರೆಂಬ ಸಂದೇಶ ಸಾರಿದ ವಿಶ್ವಮಾನ್ಯ ವಚನಕಾರ ದೇವರ ದಾಸಿಮಯ್ಯನವರಂತಹ ಚೇತನರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದರು.
ದೇವಾಂಗ ಸಮಾಜದ ಅಧ್ಯಕ್ಷ ವೀರನಗೌಡ ಗಂಜಿ, ಪರಣ್ಣ ಕಡ್ಡಿ, ಶ್ರೀಧರ ಗಂಜಿಗೌಡರ, ಶ್ರೀಧರ ಬಿದರಳ್ಳಿ, ಲಕ್ಷ್ಮಣ ಜುಂಚಾ, ಪುಂಡಲಿಕ ಕಡ್ಡಿ, ಪ್ರಸಾದ ಶಿನ್ನೂರ, ಆನಂದ ಸಿಂಹಾಸನದ, ಮಹಾಬಳೇಶ ಹವಳದ, ಅಶೋಕ ಕುದರಿಮೋತಿ, ಶಂಕರ ಇಂಜನಿ, ವಿನಾಯಕ ಮಸೂದಿ ಸೇರಿದಂತೆ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಇದ್ದರು.



