ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ ವರ್ಷದ ಬರಗಾಲ, ಪ್ರಸಕ್ತ ವರ್ಷದ ಸುಡು ಬಿಸಿಲ ತಾಪ, ನೀರಿನ ಕೊರತೆಯಿಂದ ಕಂಗೆಟ್ಟಿದ್ದ ಜನ ಸಮುದಾಯಕ್ಕೆ ಶನಿವಾರ ಬೆಳ್ಳಂಬೆಳಿಗ್ಗೆ ಗುಡುಗು-ಸಿಡಿಲಬ್ಬರದೊಂದಿಗೆ ಸುರಿದ ಮಳೆ ಕೊಂಚ ನೆಮ್ಮದಿ ಮೂಡಿಸಿತು. ತಾಲೂಕಿನ ಬಹುತೇಕ ಕಡೆ ಬೆಳಿಗ್ಗೆ 2 ಗಂಟೆಗಳ ಕಾಲ ಸುರಿದ ಮಳೆ ಇಳೆಯನ್ನು ತಂಪಾಗಿಸಿತು.
ಮೊದಲ ಮಳೆಯಾದ್ದರಿಂದ ರೈತರು ಹೊಟ್ಟು-ಸೊಪ್ಪಿನ ಬಣವೆ ಮತ್ತು ಸೋರುವ ಮಾಳಿಗೆ ಮುಚ್ಚಲು ಪರದಾಡಿದರು. ಕೊಳಚೆ, ಕಸ ಕಡ್ಡಿಯಿಂದ ಕೂಡಿ ಗಬ್ಬು ನಾರುತ್ತಿದ್ದ ಚರಂಡಿಗಳಲ್ಲಿ ಸಣ್ಣ ಪ್ರಮಾಣದ ನೀರು ಹರಿದು ತ್ಯಾಜ್ಯ ಹಳ್ಳ ಸೇರಿತು. ತಗ್ಗು ಗುಂಡಿಗಳಿಂದ ಕೂಡಿದ್ದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾದರೂ ಧೂಳಿನಿಂದ ಪಾರು ಮಾಡಿತು. ಮಾಗಿ ಉಳುಮೆ ಮಾಡಿರುವ ರೈತರು ಭೂಮಿಯನ್ನು ಬಿತ್ತನೆಗೆ ಸಜ್ಜುಗೊಳಿಸಲು ಕೊಂಚ ಅನಕೂಲವಾಯಿತು. ಈ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತರು ದೊಡ್ಡ ಮಳೆಯಾಗಿ ಕೆರೆ-ಕಟ್ಟೆ, ಹಳ್ಳ ತುಂಬಿ ಜನ ಜಾನುವಾರುಗಳ ನೀರಿನ ಬವಣೆ ತಪ್ಪಬಹುದು ಎಂಬ ನಂಬಿಕೆಯಲ್ಲಿದ್ದಾರೆ.