ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಗದಗ
ಶನಿವಾರ ಮುಂಜಾನೆ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಸಿಡಿಲು, ಗುಡುಗು ಸಮೇತ ಮಳೆ ಸುರಿದು ಅನಾಹುತ ಸೃಷ್ಟಿಸಿದೆ.
ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಬ್ಬರದ ಮಳೆ ಸುರಿದಿದ್ದು, ಸಿಡಿಲು ಬಡಿದು ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ಎಮ್ಮಿ ಹಾಗೂ ಎತ್ತು ಮೃತಪಟ್ಟಿದೆ.
ರೈತ ಶಂಕ್ರಪ್ಪ ಸೋಂಪುರ ಅವರಿಗೆ ಸೇರಿದ ಎತ್ತು, ಹನಮಪ್ಪ ಕೊಂಚಿಗೇರಿ ಎಂಬುವವರಿಗೆ ಸೇರಿದ ಎಮ್ಮಿ ಮೃತಪಟ್ಟಿದ್ದು, ಎರಡು ರೈತ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೀತಿಯಿಂದ ಸಾಕಿದ ಎತ್ತು ಕಳೆದುಕೊಂಡ ರೈತ ಶಂಕ್ರಪ್ಪನ ಕುಟುಂಬ ಕಂಗಾಲಾಗಿದೆ.
ಗದಗ-ಬೆಟಗೇರಿಯಲ್ಲೂ ಸಿಡಿಲು- ಗುಡುಗು ಸಮೇತ ಮಳೆ ಸುರಿದಿದ್ದು, ಬೆಟಗೇರಿಯ ರೈಲ್ವೆ ಸೇತುವೆ ಜಲಾವೃತಗೊಂಡಿದೆ. ವಾಹನ ಸವಾರರು ಪರದಾಡುವಂತಾಯಿತು. ಬೆಟಗೇರಿಯ ಕುರಹಟ್ಟಿ ಪೇಟೆಯ ನೀರಿನ ಟ್ಯಾಂಕ್ ಬಳಿಯ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಗೆ ನುಗ್ಗಿದ ನೀರು ಹೊರ ಹಾಕಲು ಜನರು ಹರಸಾಹಸ ಪಟ್ಟರು.