ವಿಜಯಸಾಕ್ಷಿ ಸುದ್ದಿ, ಗದಗ : ಇಂದು ಮಹಿಳೆಯರು ಸಾಕಷ್ಟು ಸೌಲಭ್ಯಗಳ ಅನುಕೂಲತೆಯಿಂದ ಐಷಾರಾಮಿ ಜೀವನ ನಡೆಸುತ್ತಿದ್ದರೂ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಳು ಇಲ್ಲದಾಗಿವೆ. ಯಾವದೇ ಹೆಚ್ಚಿನ ಸೌಲಭ್ಯಗಳು ಇಲ್ಲದ ಅಂದಿನ ಕಾಲದಲ್ಲಿ ಅಕ್ಕಮಹಾದೇವಿ ಅನೇಕ ಸಂಕಷ್ಟಗಳನ್ನು ಎದುರಿಸಿ ಶಾಂತಿ, ಸಮಾಧಾನದಿಂದ ಬಾಳಿ ಬದುಕಿದ್ದಳೆಂಬುದಕ್ಕೆ ಅಕ್ಕಮಹಾದೇವಿಯ ಅನೇಕ ವಚನಗಳು ಸಾಕ್ಷಿಯಾಗಿವೆ ಎಂದು ನಿವೃತ್ತ ಶಿಕ್ಷಕಿ ಶಾಂತಾ ಕುಂದಗೋಳ ಅಭಿಪ್ರಾಯಪಟ್ಟರು.
ಎಸ್ವಾಯ್ಬಿಎಂಎಸ್ ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರವು ಸಿದ್ಧಲಿಂಗ ನಗರದ ಬಸವ ಯೋಗ ಮಂದಿರದಲ್ಲಿ ಆಚರಿಸಿದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಕ್ಕ ಮಹಾದೇವಿ ಒಂದು ವಚನದಲ್ಲಿ ತಿಳಿಸಿರುವಂತೆ ನಡೆ, ನುಡಿ, ತನು, ಮನ, ಭಾವ ಶುದ್ಧವಿದ್ದವರನ್ನು ತೋರಿ ಎನ್ನನು ಬದುಕಿಸಯ್ಯಾ ಎಂದು ಚನ್ನಮಲ್ಲಿಕಾರ್ಜುನನಲ್ಲಿ ಪ್ರಾರ್ಥಿಸಿರುವಂತೆ ಮತ್ತು ಬೆಟ್ಟದ ಮೇಲೆ, ಸಮುದ್ರದ ದಂಡೆ, ಸಂತೆಯಲ್ಲಿ ಮನೆ ಮಾಡಿದಾಗ ಸ್ತುತಿ-ನಿಂದೆಗಳು ಬಂದೆಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕೆಂದು ಹೇಳಿರುವಂತೆ ಮಹಿಳೆ ಜೀವನ ನಡೆಸಿದ್ದಾದರೆ ಸುಖ ಜೀವನ ಅವರದಾಗುವುದು. ಈ ನಿಟ್ಟಿನಲ್ಲಿ ಶಿವಶರಣೆ ಅಕ್ಕಮಹಾದೇವಿ ವಚನಗಳು ಮಹಿಳೆಯರ ಸುಖ ಜೀವನದ ಸೋಪಾನಗಳಾಗಿವೆ.
ಮಹಿಳೆಯರಾದ ನಾವೆಲ್ಲರೂ ಇಂದು ಆಡಂಬರ, ಐಷಾರಾಮಿ ಜೀವನಕ್ಕೆ ಹೆಚ್ಚಿನ ಗಮನ ಕೊಡದೇ ಆದರ್ಶಮಯ, ಸುಖಮಯ, ಸಮಾಧಾನಕರ, ಶಾಂತಿ, ನೆಮ್ಮದಿಯ ಬದುಕಿಗಾಗಿ ಅಕ್ಕನ ತತ್ವಾದರ್ಶಗಳನ್ನು ಪರಿಪಾಲಿಸಬೇಕೆಂದು ಸಭಿಕರಲ್ಲಿ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸೂರ ಮಾತನಾಡಿ, ಎಲ್ಲರಿಗೂ ಅಕ್ಕನಾದಂತೆ ಇಂದು ಮಹಿಳೆಯರು ಕೌಟುಂಬಿಕ, ಸಾಮಾಜಿಕ ಜೀವನದಲ್ಲಿ ಎದುರಾಗುವ ಅನ್ಯಾಯ, ಅನೀತಿ, ಅತ್ಯಾಚಾರಗಳನ್ನು ಪ್ರತಿಭಟಿಸುವ ಶಕ್ತಿವಂತರಾಗಬೇಕು. ಅದಕ್ಕಾಗಿ ಅಕ್ಕನ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟುಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಮಾಜಿ ಅಧ್ಯಕ್ಷೆ ಜಯಶ್ರೀ ವಸ್ತçದ, ಹಿರಿಯ ಸದಸ್ಯೆ ಗಿರಿಜಕ್ಕ ನಾಲತ್ವಾಡಮಠ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀಣಾ ಮಾಲಿಪಾಟೀಲ, ಶಕುಂತಲಾ ಬೆಲ್ಲದ, ಅರುಣಾ ಇಂಗಳಳ್ಳಿ, ಗಿರಿಜಾ ಅಂಗಡಿ, ಪ್ರೇಮಾ ಗಾಣಿಗೇರ, ಶೋಭಾ ಭಾಂಡಗೆ, ಮಹಾದೇವಿ ಚರಂತಿಮಠ ಇನ್ನಿತರೆ ಸದಸ್ಯನಿಯರು ಪಾಲ್ಗೊಂಡಿದ್ದರು. ಗೌರಿ ಜಿರಂಕಳಿ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಮೇಕಳಿ ಸ್ವಾಗತಿಸಿದರು. ಕಾರ್ಯದರ್ಶಿ ಸುಲೋಚನಾ ಐಹೊಳ್ಳಿ ಕಾರ್ಯಕ್ರಮ ನಿರೂಪಿಸಿದರು.