ವಿಜಯಸಾಕ್ಷಿ ಸುದ್ದಿ, ಧಾರವಾಡ : ಇಂದು ಮಕ್ಕಳನ್ನು ನೋಡಿಕೊಳ್ಳುವುದು ಒಂದು ಸವಾಲಿನ ಕಾರ್ಯವಾಗಿದೆ ಎಂದು ದಾಂಡೇಲಿಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ವಿನಯಾ ಒಕ್ಕುಂದ ಹೇಳಿದರು.
ಅವರು ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ, ಧಾರವಾಡ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ‘ಚಿಲಿಪಿಲಿ ಕಲರವ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ‘ಚಿಲಿಪಿಲಿ ಮಕ್ಕಳ ಪ್ರತಿಭೋತ್ಸವ’ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಮಕ್ಕಳ ಮೇಲೆ ತುಂಬಾ ಒತ್ತಡವಿದೆ ಎಂಬುದನ್ನು ಪಾಲಕರು ಅರ್ಥಮಾಡಿಕೊಳ್ಳಬೇಕು. ಮಕ್ಕಳಿಗೆ ಯೋಚನೆ ಮಾಡುವ ಅವಕಾಶವೇ ಇಲ್ಲದಾಗಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಯಾವುದು ತಪ್ಪು, ಯಾವುದು ಸರಿ ಎಂದು ತಿಳಿದುಕೊಳ್ಳುವ ವ್ಯವಧಾನ ಇಲ್ಲದಾಗಿದೆ.
ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದನ್ನೇ ಬಿಡುವಂತಹ ರೋಗಗ್ರಸ್ಥ ಸಮಾಜದಲ್ಲಿ ನಾವಿದ್ದೇವೆ. ಇಂಥ ಕಾಲಘಟ್ಟದಲ್ಲಿ ನಮ್ಮ ಮಕ್ಕಳಲ್ಲಿ ಒಟ್ಟಿಗೆ ಬಾಳುವ, ಸಹಬಾಳ್ವೆಯಿಂದ ನಡೆದುಕೊಳ್ಳುವ ಗುಣಗಳನ್ನು ಕಟ್ಟಿಕೊಡಬೇಕಾಗಿದೆ.
ಕುಟುಂಬವು ಮಕ್ಕಳ ಅರೋಗ್ಯ, ಹಸಿವನ್ನು ನೀಗಿಸಿ ದೈಹಿಕ ಬೆಳವಣಿಗೆಗೆ ಲಕ್ಷ್ಯ ಕೊಡುತ್ತದೆ. ಆದರೆ ಮನುಷ್ಯತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕುಟುಂಬ ಮತ್ತು ಶಾಲೆಗಳು ಹಿಮ್ಮುಖವಾಗಿವೆ. ಇದರ ಪರಿಣಾಮ ಇಂದು ಸಮಾಜದಲ್ಲಿ ಯುವಕರ ಮನಸ್ಥಿತಿ ನೋಡುತ್ತೇವೆ. ಅತ್ಯಂತ ಬುದ್ಧಿವಂತ ಮಕ್ಕಳು ಇದ್ದರೂ ಕೂಡಾ ಅವರಲ್ಲಿ ಮನುಷ್ಯತ್ವ ಗುಣ ಇರುವುದಿಲ್ಲ. ಇಂಥ ಮನುಷ್ಯತ್ವ, ಭಾವನಾತ್ಮಕ, ಸಹಬಾಳ್ವೆಯ ಪರಿಕಲ್ಪನೆಯನ್ನು ಇಂಥ ಮಕ್ಕಳ ಶಿಬಿರಗಳು ಕಟ್ಟಿಕೊಡುತ್ತಿರುವುದು ಅಭಿನಂದನೀಯ. ಈ ಕಾರಣಕ್ಕಾಗಿಯೇ ಮಕ್ಕಳ ಶಿಬಿರಗಳು ಇಂದು ಮುಖ್ಯವಾಗಿವೆ ಎಂದರು.
ಅತಿಥಿಗಳಾಗಿ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಯಲ್ಲಪ್ಪ ಬೆಂಡಿಗೇರಿ, ಟೆಲಿಕಾಂ ಅಧಿಕಾರಿ ಶಿಲ್ಪಾರಾಣಿ ಚೆಲ್ಲೂರ, ಎಲ್ಐಸಿ ಅಧಿಕಾರಿ ಆಕಾಶ ಹುಬ್ಬಳ್ಳಿ ಕಾರ್ಯಕ್ರಮದಲ್ಲಿದ್ದರು. ಅಧ್ಯಕ್ಷತೆ ವಹಿಸಿ ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಎಚ್. ನಾಯಕ, ಡಾ.ಬಾಳಪ್ಪಾ ಚಿನಗುಡಿ, ಸಿಕಂದರ ದಂಡಿನ, ಸೋಮು ಕಾರಿಗನೂರು, ಭಾಸ್ಕರ ಪುಟ್ಟಣ್ಣ, ಪ್ರಮೀಣಾ ಜಕ್ಕಣ್ಣವರ, ಶೃತಿ ಹುರುಳಿಕೊಪ್ಪ, ಮಲ್ಲನಗೌಡ ಪಾಟೀಲ, ಡಾ.ಅಲ್ಲಾಭಕ್ಷ ಮಕಾನದಾರ, ಅಪ್ರೀನ್ ಬಾನು ಜಕಾತಿ, ನೇತ್ರಾ ಪವಾರ, ಮಂಜುನಾಥ ಬಡಿಗೇರ ಹಾಗೂ ರೇಷ್ಮಾ ತಸಿಲ್ದಾರ್ ಇದ್ದರು.
ಮಕ್ಕಳನ್ನು ಸಾಕಿ ಸಲುಹುವ ಅತ್ಯಂತ ಕಠಿಣವಾದ ಜವಾಬ್ದಾರಿಯನ್ನು ಸಮಾಜವು ಮಹಿಳೆಯರಿಗೆ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತಾ ಮಹಿಳಾ ಲೋಕ ಬಂದಿದೆ. ನಾವು ವಿಮಾನ ತಯಾರು ಮಾಡುವುದರಿಂದ ಹಿಡಿದು ಎಲ್ಲ ವಸ್ತುವನ್ನು ತಯಾರು ಮಾಡಬಹುದು. ಆದರೆ ಒಂದು ಮಗುವನ್ನು ಮನುಷ್ಯರನ್ನಾಗಿ ಬೆಳೆಸುವಂತಹ ಜಗತ್ತಿನ ಅತ್ಯಂತ ಕಠಿಣ ಕೆಲಸವನ್ನು ತಾಯಂದಿರು ಮಾಡುತ್ತಾ ಬಂದಿದ್ದಾರೆ ಎಂದು ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.