ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕದ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ನಗರದಲ್ಲಿರುವ ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಲಾಯಿತು.
ಮುಖಂಡರಾದ ನಿಂಗನಗೌಡ ಮಾಲಿಪಾಟೀಲ್ ಮಾತನಾಡಿ, ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ, ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ, ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ, ಶ್ರೇಷ್ಠ ಶಿವಶರಣ, ಕ್ರಾಂತಿಯೋಗಿ, ಜಗಜ್ಯೋತಿ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಕರವೇ ತಾಲೂಕಾಧ್ಯಕ್ಷ ನಾಗಪ್ಪ ಅಣ್ಣಿಗೇರಿ, ಜಿಲ್ಲಾ ಯುವ ಮುಖಂಡರಾದ ಕುಮಾರ್ ರೇವಣ್ಣ, ಸರಸ್ವತಿ ನಾಗಪ್ಪ ಅಣ್ಣಿಗೇರಿ, ಗದಗ ತಾಲೂಕಾ ಸಾಮಾಜಿಕ ಜಾಲತಾಣದ ಸಂಚಾಲಕ ಮುಸ್ತಾಕ್ ದಾವಣಗೆರೆ, 34ನೇ ವಾರ್ಡ್ ಅಧ್ಯಕ್ಷ ನಾಗರಾಜ್ ಬಂಡಿ, ರವಿ ಮಲ್ನಾಡ್, ಮಹೇಶ್ ಗುಳೇದ್, ಜಾವೀದ್, ಎಂ.ಜಿ. ಅಸುಂಡಿ, ಗೋವರ್ಧನ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.