ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳ ಒಳಿತಿಗಾಗಿ ಸಮಾಜ ಮತ್ತು ಸರಕಾರಗಳು ನೂರಾರು ಸೌಲಭ್ಯಗಳನ್ನು ಕಲ್ಪಿಸಿವೆ. ವಿದ್ಯಾರ್ಥಿಗಳು ವಿದ್ಯಾವಂತರಾಗಲೆಂದು ಅವರಿಗೆ ಊಟ, ವಸತಿ, ವಸ್ತç, ಪುಸ್ತಕ, ವಾಹನ ಏನೆಲ್ಲ ಅಗತ್ಯವಿದೆಯೋ ಅವನ್ನೆಲ್ಲ ಸರಕಾರವು ಉಚಿತವಾಗಿ ಪೂರೈಸುತ್ತಿದೆ. ಆದರೂ ಇಂದು ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಗೆ ಮುನ್ನಡೆಯುತ್ತಿಲ್ಲ. ಬೇಡದ ಕಾರ್ಯಗಳಲ್ಲಿ ತೊಡಗುತ್ತಿದ್ದು, ಇದಕ್ಕೆ ಕಾರಣ ಅವರಲ್ಲಿ ನೈತಿಕ ಬಲ ಇಲ್ಲದಿರುವುದಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಬಸವಣ್ಣನವರ ವಚನಗಳು ಸಹಕಾರಿಯಾಗಿವೆ ಎಂದು ವಿದ್ಯಾರ್ಥಿ ನಚಿಕೇತ ಸಣ್ಣೆಲಿ ಅಭಿಪ್ರಾಯಪಟ್ಟರು.
ಎಸ್ವಾಯ್ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಹಾಗೂ ಗದಗ ತಾಲೂಕಾ ಕದಳಿ ಮಹಿಳಾ ವೇದಿಕೆಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಜರುಗಿದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರು ತಿಳಿಸಿದ ಕಾಯಕ-ದಾಸೋಹ ತತ್ವಾಚರಣೆಗಳನ್ನು ನಾವಿಂದು ಪಾಲಿಸಿದರೆ ಕಲ್ಯಾಣ ರಾಜ್ಯ ಸ್ಥಾಪನೆಯಾಗುವಲ್ಲಿ ಸಂದೇಹವಿಲ್ಲವೆಂದರು.
ಮುಖ್ಯ ಅತಿಥಿ ನಾಗರಾಜ ಅಡವಿ, ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಲೋಚನಾ ಐಹೊಳ್ಳಿ ಮಾತನಾಡಿದರು. ವಾಸುದೇವರಡ್ಡಿ ಮೇಕಳಿ, ವಿವೇಕ ಹಿತ್ತಲಮನಿ, ಚೇತನ ಚುಂಚಾ, ಪಾರ್ವತಿ ಭೂಮಾ, ಗಿರಿಜಾ ನಾಲತ್ವಾಡಮಠ, ಸುಮಾ ಸುರೇಬಾನ, ಮಹಾದೇವಿ ಚರಂತಿಮಠ, ಗಿರಿಜಾ ಅಂಗಡಿ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯಾ ಚನ್ನಶೆಟ್ಟಿ ವಚನ ಪ್ರಾರ್ಥನೆ ಹೇಳಿದರು. ಡಾ. ಎಂ.ವಿ. ಐಹೊಳ್ಳಿ ಸ್ವಾಗತಿಸಿದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಬೇಲಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ ಅಂದಾನಯ್ಯ ಹಿತ್ತಲಮನಿ (ಮಣ್ಣೂರಮಠ) ಮಾತನಾಡಿ, ಬಸವಣ್ಣನವರು ಈ ನಾಡಿಗೆ, ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯಾಗಿರುವ ವಚನಗಳು ಮಾನವೀಯ ಮೌಲ್ಯಗಳ ರಕ್ಷಣೆಗೆ ಭದ್ರಕೋಟೆಯಾಗಿವೆ ಎಂದು ಅನುಭವ ನುಡಿಗಳನ್ನು ತಿಳಿಸಿದರು.