ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಹಿರಿಯ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಸಚಂದ್ರ ಭೋಸ್ ಟ್ರಸ್ಟಿನ ಹಿಂದಿನ ಅಧ್ಯಕ್ಷರಾದ ವೇ. ವೀರಯ್ಯಸ್ವಾಮಿ ಶಾಸ್ತಿçಮಠ ಇವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರಿನ ರಾಜಾಜಿನಗರದಲ್ಲಿ ಶ್ರೀ ಜಗದ್ಗುರು ದಾರುಕಾಚಾರ್ಯರ ಆಶ್ರಮ ಸ್ಥಾಪಿಸಿ ದಾರುಕಾಚಾರ್ಯರ ವಿಗ್ರಹ ಸ್ಥಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದ ಅತ್ಯಂತ ಹಿರಿಯ ಅಧ್ಯಾತ್ಮಿಕ ಶಕ್ತಿ ಇವರಾಗಿದ್ದರು. ಇವರ ಆಧ್ಯಾತ್ಮಿಕ ಸಾಧನೆಯನ್ನು ಮೆಚ್ಚಿದ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು `ಅಂತರ್ ಜ್ಯೋತಿಷಿ’ ಬಿರುದು ಪ್ರದಾನ ಮಾಡಿದ್ದರು.
ಶ್ರೀಲಂಕಾದ ಜಾಫ್ನಾದಲ್ಲಿರುವ ರೇಣುಕಾಶ್ರಮಕ್ಕೆ ಹೋಗಿ ಅಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಐತಿಹ್ಯಗಳನ್ನು ಅಭ್ಯಾಸ ಮಾಡಿದವರಾಗಿದ್ದರು.
ಸನಾತನ ಧರ್ಮದ ಗುರು ಪರಂಪರೆಯ ಶಕ್ತಿಯನ್ನು ಸಾರುವುದರೊಂದಿಗೆ ಸದಾ ಧರ್ಮ ಜಾಗೃತಿ ಮಾಡುತ್ತಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಿದ್ದ ಶತಾಯುಷಿ ವೀರಯ್ಯಸ್ವಾಮಿ ಶಾಸ್ತಿçಮಠರ ಅಗಲಿಕೆ ಆಧ್ಯಾತ್ಮ ಲೋಕಕ್ಕೆ ಹಾನಿ ಉಂಟು ಮಾಡಿದೆ. ಇತ್ತೀಚೆಗೆ ತಾವು ಅವರೊಡನೆ ಮಾತನಾಡಿ ಆಶೀರ್ವದಿಸಿದ್ದು ಹಸಿರಾಗಿರುವಾಗಲೇ ಅವರು ಅಗಲಿರುವುದು ನೋವಿನ ಸಂಗತಿಯಾಗಿದೆ. ಅವರ ಪವಿತ್ರ ಆತ್ಮಕ್ಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಚಿರಶಾಂತಿ ನೀಡಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.