ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜಗತ್ತಿನಲ್ಲಿ ಸನಾತನ ಧರ್ಮವು ಅಳಿವಿನ ಅಂಚಿನಲ್ಲಿದ್ದಾಗ ಅದನ್ನು ಉಳಿಸಿ, ಬೆಳೆಸಲು ಅವತರಿಸಿ ಬಂದವರು ಜಗದ್ಗುರು ಶಂಕರಾಚಾರ್ಯರು. 8ನೇ ಶತಮಾನದಲ್ಲಿ ಅವರು ಜನ್ಮ ತಾಳಿ ಕೇವಲ 32ವರ್ಷಗಳಲ್ಲಿ ಇನ್ನಿಲ್ಲದ ಸಾಧನೆ ಮಾಡಿದ ಅವರು ಈ ಜಗದ ಮೊದಲ ಆಚಾರ್ಯರು ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ದತ್ತ ಭಕ್ತ ಮಂಡಳಿಯ ವತಿಯಿಂದ ಆಚರಿಸಲಾದ ಜಗದ್ಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಶ್ರೀ ಶಂಕರರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಒಳ್ಳೆಯ ಗುರುಗಳಿಗೆ ಒಬ್ಬ ಒಳ್ಳೆಯ ಶಿಷ್ಯ ದೊರಕುವುದು ಅಷ್ಟು ಸುಲಭದ ಮಾತಲ್ಲ. ಗೋವಿಂದ ಭಗವತ್ಪಾದರ ಬಳಿ ಇವರು ಶಿಷ್ಯತ್ವ ಕೋರಿ ಹೋದಾಗ ಈ ಚಿಕ್ಕ ಬಾಲಕನಿಗೆ ಏನು ಹೇಳುವುದು ಎಂದು ತಿಳಿಯದೆ ಅವನನ್ನು ಸಾಗ ಹಾಕಲು ಗುರುಗಳು ಶ್ರೀ ವಿಷ್ಣು ಸಹಸ್ರನಾಮಕ್ಕೆ ಭಾಷ್ಯ ಬರೆದುಕೊಂಡು ಬರಲು ಹೇಳಿದರು. ಇದರಿಂದ ಅವನ ಶಿಷ್ಯತ್ವವನ್ನು ಒಂದೆರಡು ವರ್ಷಗಳ ಕಾಲ ಮುಂದೂಡಬಹುದೆಂಬ ಅವರ ನಿರೀಕ್ಷೆ ಸುಳ್ಳಾಯಿತು. ಮರುದಿನವೇ ಅದಕ್ಕೆ ಭಾಷ್ಯೆ ಬರೆದುಕೊಂಡು ಹೋದ ಶಂಕರರು ಗುರುಗಳ ಶಿಷ್ಯತ್ವವನ್ನು ಸಂಪಾದಿಸುವಲ್ಲಿ ಯಶಸ್ವಿಯಾದರು ಎಂಬುದನ್ನು ತಿಳಿದರೆ ಅವರಲ್ಲಿ ಆಧ್ಯಾತ್ಮದ ಹಸಿವು ಅದೆಷ್ಟಿತ್ತು ಎಂಬುದು ತಿಳಿಯುತ್ತದೆ ಎಂದು ವಿವರಿಸಿದರು.
ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ವೇ.ಮೂ. ಶ್ರೀವಲ್ಲಭಭಟ್ಟ ಸದರಜೋಷಿ ಪೂಜೆ ನೆರವೇರಿಸಿದರು. ನಂತರ ಶ್ರೀ ದತ್ತಾತ್ರೇಯನಿಗೆ ಪಲ್ಲಕ್ಕಿ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಶೇಷಗಿರಿ ಕುಲಕರ್ಣಿ, ಬಿ.ಎಲ್. ಕುಲಕರ್ಣಿ, ಶ್ರೀ ದತ್ತಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ, ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಖಜಾಂಚಿ ಮಂಜುನಾಥ ಗ್ರಾಮಪುರೋಹಿತ, ಸಹ ಕಾರ್ಯದರ್ಶಿ ಪ್ರಕಾಶ ಕಾಳೆ, ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಎ.ಜಿ. ಕುಲಕರ್ಣಿ, ಗುರುರಾಜ ಕುಲಕರ್ಣಿ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ಜಗನ್ನಾಥ ಸೂರಭಟ್ಟನವರ, ವಿನಾಯಕ ಗ್ರಾಮಪುರೋಹಿತ, ಮುಕುಂದಭಟ್ಟ ಸೂರಭಟ್ಟನವರ, ಅಜಿತ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಕಿರಣ ಕಾಳೆ, ರಾಮಕೃಷ್ಣ ಸದರಜೋಷಿ, ಪವನ ಗ್ರಾಮಪುರೋಹಿತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.