HomeGadag Newsತಾಯಿಸ್ಥಾನವನ್ನು ಯಾರೂ ತುಂಬಲಾರರು : ಸಿದ್ಧರಾಮ ಶ್ರೀಗಳು

ತಾಯಿಸ್ಥಾನವನ್ನು ಯಾರೂ ತುಂಬಲಾರರು : ಸಿದ್ಧರಾಮ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಾಯಿಗಿಂತ ದೊಡ್ಡವರು ಯಾರೂ ಇಲ್ಲ. ತಾಯಿಯಿಂದ ಸಂಸ್ಕಾರ ಮತ್ತು ಪಾಠ ಕಲಿತವರೇ ಧನ್ಯರು. ಹುಟ್ಟಿದ ಶಿಶುವಿಗೆ ತಾಯಿಯೇ ಮೊದಲ ಗುರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2695ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಉಪ್ಪಿಗಿಂತ ರುಚಿಯಿಲ್ಲ-ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು ಉಲ್ಲೇಖಿಸಿ, ಉಪ್ಪಿನ ರುಚಿಯನ್ನು ಯಾವ ವಸ್ತುವೂ ಕೊಡಲು ಸಾಧ್ಯವಿಲ್ಲ. ಅದೇ ರೀತಿ ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ತಾಯಿಯ ಸ್ಥಾನ ಬಹಳ ಮಹತ್ವದ್ದಾಗಿದೆ. ಅಂತಃಕರಣ, ವಾತ್ಸಲ್ಯ, ಪ್ರೀತಿ, ದಯೆ ತಾಯಿಯಲ್ಲಿರುವ ವಿಶೇಷ ಗುಣಗಳು. ಪ್ರಾಚೀನ ಕಾಲದಿಂದಲೂ ತಂದೆ-ತಾಯಿಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಮಕ್ಕಳೂ ಸಹಿತ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳದೇ ಪಾಲನೆ-ಪೋಷಣೆ, ಸಂರಕ್ಷಣೆ ಮಾಡಬೇಕು. ಹೆಣ್ಣು ಮಕ್ಕಳಿಗಾಗಿಯೇ ಸರಕಾರದ ಇಲಾಖೆ ಮತ್ತು ಸಬಲೀಕರಣಕ್ಕಾಗಿ ವಿಶೇಷ ಯೋಜನೆಗಳು ಜಾರಿಯಲ್ಲಿವೆ. ಸಮಾಜದಲ್ಲಿ ಹೆಣ್ಣುಮಕ್ಕಳು ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಉಪಯೋಗ ಮಾಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.

ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರು ಲಿಂಗೈಕ್ಯ ಡಾ. ಅಕ್ಕ ಅನ್ನಪೂರ್ಣ ತಾಯಿ ಬೀದರ ಅವರಿಗೆ ನುಡಿನಮನ ಸಲ್ಲಿಸಿದರು. ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ರತ್ನವ್ವ ಚನ್ನವೀರಪ್ಪ ಕ್ಯಾಡದ, ಮಹಾದೇವಿ ಈಶ್ವರಪ್ಪ ಅರಳಿ, ಜ್ಯೋತಿ ಅಶೋಕ ಅಗಸನಕೊಪ್ಪ ಅವರನ್ನು ಪೂಜ್ಯರು ಸಂಮಾನಿಸಿದರು.

ಗುರುನಾಥ ಸುತಾರ, ಅಶೋಕ ಸುತಾರ, ಕುಮಾರಸ್ವಾಮಿ ಹಿರೇಮಠ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಅರಮಾನ ಎಂ.ನಾಗನೂರ, ವಚನ ಚಿಂತನೆಯನ್ನು ಸಾಕೀಬ್ ಎನ್.ನಾಗನೂರ ಮಾಡಿದರು. ಶಿವಾನುಭವದ ದಾಸೋಹ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದ ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ, ಪ್ರಭು ಮೆಡಿಕಲ್ಸ್ ಗದಗ ಅವರನ್ನು ಪೂಜ್ಯರು ಸಂಮಾನಿಸಿದರು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

‘ಅವ್ವನ ಮಮತೆ’ ವಿಷಯ ಕುರಿತು ಸೌಖ್ಯದಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ತೇಜಸ್ವಿನಿ ಹಿರೇಮಠ ಉಪನ್ಯಾಸ ನೀಡಿ, ತ್ಯಾಯಿಯ ತ್ಯಾಗ ದೊಡ್ಡದು. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಹೆಣ್ಣಿಗೆ ಮುಟ್ಟಿನ ಸಮಸ್ಯೆ, ರಕ್ತಹೀನತೆ, ಮಾನಸಿಕ ದೌರ್ಬಲ್ಯಗಳಂತಹ ಅನೇಕ ಸಮಸ್ಯೆಗಳು ಕಾಡುತ್ತಿರುತ್ತವೆ. ಈ ಸಮಯದಲ್ಲಿ ಪರಿವಾರದವರ ಸಹಾಯ, ಸಹಕಾರ, ಕಾಳಜಿ ಬಹಳ ಅವಶ್ಯ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸಮಾಜದಲ್ಲಿ ಹೆಣ್ಣು ಅಂದರೆ ನಿರ್ಲಕ್ಷ್ಯ ಭಾವ ಇದೆ. ಆ ಭಾವ ತೊರೆದು ಪ್ರತೀ ಹಂತದಲ್ಲೂ ಸ್ಪಂದನೆ, ಪ್ರೋತ್ಸಾಹ ಲಭಿಸಬೇಕು ಎಂದು ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!