ವಿಜಯಸಾಕ್ಷಿ ಸುದ್ದಿ, ರೋಣ : ಶುಕ್ರವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಮಾರನಬಸರಿ ಗ್ರಾಮ ತತ್ತರಿಸಿ ಹೋಗಿದ್ದು, ಗ್ರಾಮದ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯತೊಡಗಿದೆ. ಗಾಳಿ ವಿದ್ಯುತ್ ಕಂಪನಿಯವರು ತಮ್ಮ ವಾಹನಗಳ ಸಂಚಾರಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಗಳು ಸಹ ವರುಣನ ಆರ್ಭಟಕ್ಕೆ ಕೊಚ್ಚಿ ಹೋಗಿವೆ.
ಕಳೆದ ನಾಲ್ಕಾರು ದಿನಗಳಿಂದ ಮಾರನಬಸರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಆರ್ಭಟ ಜೊರಾಗಿದೆ. ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಜನತಾ ಪ್ಲಾಟ್ ಸೇರಿದಂತೆ ಸಂಕರ ಮಡ್ಡಿ ವಠಾರದಲ್ಲಿಯೂ ನದಿಯಂತೆ ಹರಿದ ಮಳೆ ನೀರಿನಿಂದ ನಾಗರಿಕ ಸಮುದಾಯ ಭಯ ಪಡುವಂತಾಗಿತ್ತು. ಮಾರನಬಸರಿ ಹಾಗೂ ಜಕ್ಕಲಿ ಸಂಪರ್ಕದ ರಸ್ತೆ ಕೂಡ ಮಳೆ ನೀರಿನಿಂದ ತುಂಬಿ, ವಾಹನ ಸವಾರರು ಪರದಾಡುವಂತಾಯಿತು.
ಮುಖ್ಯವಾಗಿ ಮಾರನಬಸರಿ ಮತ್ತು ಕಳಕಾಪೂರ ರಸ್ತೆಯಲ್ಲಿ ಗಾಳಿ ವಿದ್ಯುತ್ ಕಂಪನಿಯವರು ತಮ್ಮ ವಾಹನಗಳು ಸಂಚರಿಸಲು ಅನಧಿಕೃತವಾಗಿ ಸೇತುವೆ ನಿರ್ಮಿಸಿಕೊಂಡಿದ್ದು, ಅದು ಸಹ ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಈ ರಸ್ತೆಗೆ ಹೊಂದಿಕೊಂಡು ಜಮೀನುಗಳಿವೆ. ರೈತರು ಓಡಾಡುವ ಸಂದರ್ಭದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.