ವಿಜಯಸಾಕ್ಷಿ ಸುದ್ದಿ, ಗದಗ : ಬಸವಾದಿ ಶಿವಶರಣರು ಕಾಯಕಕ್ಕೆ ಕೊಟ್ಟಿರುವ ಸ್ಥಾನಮಾನ ಬಹಳ ದೊಡ್ಡದು. ಗುರು, ಲಿಂಗ, ಜಂಗಮಕ್ಕಿಂತಲೂ ಕಾಯಕ ಬಹಳ ವೈಶಿಷ್ಟ್ಯಪೂರ್ಣವಾದುದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2698ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕಾಯಕದಿಂದ ಒಬ್ಬ ವ್ಯಕ್ತಿ ಭಗವಂತನಿಗೆ ಪ್ರಿಯನಾಗುತ್ತಾನೆ, ಭಕ್ತನಾಗುತ್ತಾನೆ ಎಂದು 12ನೇ ಶತಮಾನದಲ್ಲಿ ಶರಣರು ಹೇಳಿದ್ದಾರೆ. ಸತ್ಯಶುದ್ಧ ಪ್ರಾಮಾಣಿಕ ಕಾಯಕದಿಂದ ಗಳಿಸಬೇಕು. ಕಾಯಕಕ್ಕೆ ತಕ್ಕಷ್ಟೇ ಪ್ರತಿಫಲ ಬಯಸಬೇಕು. ಕಾಯಕದಲ್ಲಿ ಆಸೆ ಇರಬಾರದು. ಆಸೆಯೆಂಬುದು ಭವದ ಬೀಜ.
ಆಸೆಯಿಂದ ಕಾಯಕ ಮಾಡಿದರೆ ಮುಕ್ತಿ, ಲಿಂಗಾಂಗ ಸಾಮರಸ್ಯ, ಮೋಕ್ಷ ಲಭ್ಯವಾಗುವುದಿಲ್ಲ ಎಂದು ಶರಣರು ತಿಳಿಸಿದ್ದಾರೆ ಎಂದರು.
ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು.
ಧರ್ಮಗ್ರಂಥ ಪಠಣವನ್ನು ಸುಪ್ರಿಯಾ ಎನ್.ನಾಗನೂರ, ವಚನ ಚಿಂತನೆಯನ್ನು ಅಮೃತ ವಿ.ಅಂಗಡಿ ಇವರು ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಅಕ್ಕಿ ಕೊಟ್ರಪ್ಪನವರು ಮತ್ತು ಅಂದಾನಪ್ಪ ಶಾಂತಪ್ಪ ಚವಡಿ ಪರಿವಾರದವರನ್ನು ಪೂಜ್ಯರು ಸಂಮಾನಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.
‘ಕಾಯಕ ಮತ್ತು ದಾಸೋಹ’ ಕುರಿತು ಕಡೂರಿನ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಮಾತನಾಡಿ, ವಚನಗಳು ಶರಣರ ಅನುಭವದ ನುಡಿಗಳು. ಶರಣರ ದೃಷ್ಟಿಕೋನದಲ್ಲಿ ಜಂಗಮ ಎಂದರೆ ಅನಂತವಾದುದು, ಚಲನಶೀಲವಾದುದು ಜೀವಜಗತ್ತು. ಸತ್ಯ ಶುದ್ಧ ಕಾಯಕ ಕೈಗೊಂಡಂತಹ ಸಮಯದಲ್ಲಿ ಆ ಕಾಯಕ ಕೈಲಾಸವಾಗುವುದು. ಕಾಯಕದಲ್ಲಿ ನಿರತರಾದಾಗ ಗುರು, ಲಿಂಗ, ಜಂಗಮವನ್ನಾದರೂ ಮರೆಯಬೇಕು ಎಂದು ಶರಣರು ಹೇಳಿದ್ದಾರೆ ಎಂದು ಮಾತನಾಡಿದರು.