ವಿಜಯಸಾಕ್ಷಿ ಸುದ್ದಿ, ಗದಗ : ಭಕ್ತಿ ಎಂದರೆ ಗುರುದೇವತೆಯೊಳ್ ಅನುರಾಗದಿಂದಹುದೇ ಭಕ್ತಿ, ರಾಗವೆಂದರೆ ಪ್ರೀತಿ. ಈ ಪ್ರೀತಿ ಸ್ತ್ರೀಯಲ್ಲಿ ಇದ್ದರೆ ಕಾಮವೆನಿಸುವುದು, ಪುತ್ರಾದಿಗಳಲ್ಲಿದ್ದರೆ ಮೋಹವೆನಿಸುವುದು, ಧನಕನಕಾದಿಗಳಲ್ಲಿ ಇದ್ದರೆ ಲೋಭವಿಸುವುದು. ಇದೇ ಪ್ರೀತಿ ಗುರು, ದೇವತೆಗಳಲ್ಲಿ ಇರುವುದರಿಂದ ಭಕ್ತಿ ಎನಿಸುತ್ತದೆ. ಅಂತೆಯೇ ತುಳಸಿದಾಸರು ಭಕ್ತರು ಎನಿಸಿಕೊಂಡರು ಎಂದು ರನ್ನಬೆಳಗಲಿಯ ಸಿದ್ದಾರೂಡ ಮಠ ಶಂಭುಲಿಂಗಾಶ್ರಮದ ಪೂಜ್ಯಶ್ರೀ ಕೃಷ್ಣೇಗೌಡ್ರ ಕೋಲೂರ ಹೇಳಿದರು.
ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳವರ 80ನೇ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಸ್ಮರಣೋತ್ಸವದ ಅಂಗವಾಗಿ ಜೂನ್ 22ರಿಂದ 26ರವರೆಗೆ ನಡೆಯುವ ಕೈವಲ್ಯ ಪದ್ಧತಿ ಶಿವಯೋಗ ಕುರಿತು ಶಿವಾನುಭವದಲ್ಲಿ ಅವರು ಮಾತನಾಡಿ, ಭಕ್ತಿ ದೃಢವಾಗಿರಬೇಕು. ದೃಢವಿಲ್ಲದ ಭಕ್ತಿ ಆಡಡೆದ ಕುಂಭದಲ್ಲಿ ಸುಜಲ ತುಂಬಿದಂತೆ ಎಂದು ವಚನಕಾರರು ಹೇಳಿದ್ದಾರೆ. ನಿಜಗುಣರು ಅನುಪಮಾಚಲ ಭಕ್ತಿ ಭಾವಾನುಕೂಲವೇ ಶಂಭುಲಿಂಗವೆಂದು ಹೇಳಿರುವದುಂಟು ಎಂದು ತಿಳಿಸಿದರು.
ಕರಿಕಟ್ಟಿಯ ಕುಮಾರಶಾಸ್ತಿçಗಳು ಹಿರೇಮಠ ಮಾತನಾಡಿ, ದೇವತೆಗಳ ಮೇಲೆ ದೃಢವಾದ ಪ್ರೀತಿ ವ್ಯಕ್ತ ಮಾಡುವ ರೀತಿಗಳಿಗೆ ನವವಿಧ ಭಕ್ತಿ ಎಂದು ಕರೆಯುತ್ತಾರೆ. ಅವುಗಳಲ್ಲಿ ಶ್ರವಣಂ-ಪರೀಕ್ಷಿತ ಕೀರ್ತನಂ-ನಾರದ, ಸ್ಮರಣಂ-ಪ್ರಹ್ಲಾದ, ಪಾದಸೇವನಂ-ಲಕ್ಷ್ಮಿ ಅರ್ಚನಂ- ಚೋಳರಾಜ, ವಂದನಂ-ಅಕ್ರೋಶ, ದಾಸ್ಯಂ-ಹನುಮಂತ, ಸಖ್ಯ-ಅರ್ಜುನ, ಆತ್ಮ ನಿವೇದನಂ-ಬಲಿಚಕ್ರವರ್ತಿ ಭಕ್ತಿಯ ವಿಧಗಳಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡ್ನೂರ ದಾಸೋಹ ಶ್ರೀಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸಿದ್ದರು.