ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಪುರಸಭಾ ಭವನದಲ್ಲಿ ಶುಕ್ರವಾರ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಘಟಕದಿಂದ ನಡೆದ ತಾಲೂಕು ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಒಟ್ಟು 14 ಅರ್ಜಿಗಳು ಸ್ವೀಕರಿಸಿದರು.
ನಿಗದಿಯಂತೆ ಶುಕ್ರವಾರ ಬೆಳಿಗ್ಗೆ ಆರಂಭವಾದ ಸಭೆಗೆ ಪುರಸಭೆಯ 3 ಹಾಗೂ ತಹಸೀಲ್ದಾರ್ ಕಚೇರಿ ವ್ಯಾಪ್ತಿಯ 5 ಅರ್ಜಿಗಳು ಸೇರಿ ಒಟ್ಟು 14 ಅರ್ಜಿಗಳನ್ನು ಸಾರ್ವಜನಿಕರು ನೀಡಿದರು. ಮನವಿ ಹಾಗೂ ದೂರುಗಳನ್ನು ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಸ್ಥಳದಲ್ಲಿಯೇ 8 ಅರ್ಜಿಗಳನ್ನು ವಿಲೇವಾರಿ ಮಾಡಿ ಇನ್ನುಳಿದ 6 ಅರ್ಜಿಗಳಿಗೆ ದೂರು ನೀಡುವಂತೆ ಸೂಚಿಸಿದರು.
ಸಾರ್ವಜನಿಕರು ಸರ್ಕಾರಿ ಕಚೇರಿಗಳನ್ನು ಅಲೆಯಬಾರದು ಎಂದು ಸರ್ಕಾರ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸ್ಥಳೀಯ ಕಚೇರಿಗಳಿಗೆ ಕಳುಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸುತ್ತಿದೆ. ಆದರೆ ಸ್ಥಳೀಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ಹಿಂಜರಿಯುತ್ತಿರುವುದು ವಿಪರ್ಯಾಸ ಎಂದು ನಾಗರಿಕರು ಬೇಸರಿಸಿದರು.
ಈ ವೇಳೆ ಲೋಕಾಯುಕ್ತ ಸಿಪಿಐ ರವಿ ಪುರಷೋತ್ತಮ, ಲೋಕಾಯುಕ್ತ ಇನ್ಸ್ಪೆಕ್ಟರ್ ಶಾಹುಬಾಯಿ ತೇಲಿ, ತಾ.ಪಂ ಇಒ ಬಸವರಾಜ ಬಡಿಗೇರ, ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಬಾಗವಹಿಸಿದ್ದರು.
ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರಿಗಷ್ಟೇ ಅಲ್ಲದೆ, ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘಟನೆಗಳ ಬಹುತೇಕ ಮುಖಂಡರಿಗೆ ಲೋಕಾಯುಕ್ತರು ಪುರಸಭೆಗೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ ಎನ್ನುವುದು ವಿಪರ್ಯಾಸ. ಪರಿಣಾಮ, ಕರ್ನಾಟಕ ಲೋಕಾಯುಕ್ತ ಜಿಲ್ಲಾ ಘಟಕದಿಂದ ನಡೆದ ತಾಲೂಕು ಸಾರ್ವಜನಿಕ ಕುಂದು-ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಬೆರಳಣಿಕೆ ಅರ್ಜಿಗಳು ಬಂದಿದ್ದು ಕೆಲ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.