ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಪಾರದರ್ಶಕವಾಗಿ ಕ್ರೀಡಾಕೂಟಗಳನ್ನು ನಡೆಸುವುದು ನಮ್ಮಲ್ಲರ ಹೊಣೆಗಾರಿಕೆಯಾಗಿದೆ. ಮಕ್ಕಳಲ್ಲಿ ಸೌಹಾರ್ದತೆ ಮೂಡಿಸಲು ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ ಷಣ್ಮುಖಪ್ಪ ತಿಳಿಸಿದರು.
ಹರಪನಹಳ್ಳಿ ತಾಲೂಕಿನ ಚಿಗಟೇರಿ ನಾರದಮುನಿ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟಗಳ ಕ್ರಿಯಾಯೋಜನೆಗಳ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತಾಡಿದರು.
ಮಕ್ಕಳಲ್ಲಿ ಸೌಹಾರ್ದತೆಯ ಮನೋಭಾವ ಬೆಳೆಸಬೇಕು. ಸ್ಥಳೀಯ ತರಬೇತುದಾರರನ್ನು ನೇಮಕ ಮಾಡಿಕೊಳ್ಳದೇ ವಲಯ ಮಟ್ಟದ ಕ್ರೀಡಾಕೂಟಗಳನ್ನು ಸೌಹಾರ್ದಯುತವಾಗಿ, ಶಾಂತಿಯುತವಾಗಿ ದೈಹಿಕ ಶಿಕ್ಷಕರು ನಡೆಸಿಕೊಡಬೇಕು ಎಂದರು.
ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ ರೆಡ್ಡಿ ಮಾತನಾಡಿ, ಆಟಗಳಿಂದ ಮಕ್ಕಳಲ್ಲಿ ಚುರುಕುತನ ಹೆಚ್ಚುತ್ತದೆ ಮತ್ತು ಆಟಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಅವರನ್ನು ದೈಹಿಕವಾಗಿ ಸದೃಢಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಓಬಳೇಶ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಹೆಚ್.ಹನಮಂತಪ್ಪ ತೆಲಿಗಿ ರಾಣೆಬೆನ್ನೂರು ಅವರನ್ನು ಸನ್ಮಾನಿಸಲಾಯಿತು.